ಭುವನೇಶ್ವರ: ಕೊರೊನಾದಿಂದ ಮದುವೆಯಾದ 6 ತಿಂಗಳಿಗೇ ಪತಿಯನ್ನು ಕಳೆದುಕೊಂಡ ಮಹಿಳೆಯೋರ್ವಳು ಕೊರೊನಾ ಪರಿಹಾರ ನಿಧಿಗೆ 40 ಲಕ್ಷ ರೂ. ದೇಣಿಗೆ ನೀಡಿರುವ ಹೃದಯಸ್ಪರ್ಶಿ ಘಟನೆ ಒಡಿಶಾದ ಬಸುದೇವಪುರದಲ್ಲಿ ನಡೆದಿದೆ.
23 ವರ್ಷದ ಮೌಸುಮಿ ಮೊಹಾಂತಿ ಮದುವೆಯಾದ ಎರಡು ವಾರಕ್ಕೆ ಪತಿಗೆ ಕೊರೊನಾ ಸೋಂಕು ತಗುಲಿತ್ತು. ಇದಾಗಿ ಐದಾರು ತಿಂಗಳಲ್ಲಿ ಆಕೆ ಗಂಡನನ್ನು ಕಳೆದುಕೊಂಡಿದ್ದಳು. ಜೀವನ್ಮರಣ ಸ್ಥಿತಿಯಲ್ಲಿದ್ದ ಪತಿಯನ್ನು ಉಳಿಸಿಕೊಳ್ಳಲು ಆಕೆ ೪೦ ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದಳು.
ಆದರೆ ಆಕೆಯ ಪತಿ ಅದಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ್ದರು. ಇದರಿಂದಾಗಿ ತನ್ನ ಬಳಿಯಿದ್ದ 40 ಲಕ್ಷ ರೂ. ಹಣವನ್ನು ಇಟ್ಟುಕೊಳ್ಳಲು ಮನಸ್ಸಾಗದೆ ಇತರೆ ಕೊರೊನಾ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ಅದನ್ನು ಪರಿಹಾರ ನಿಧಿಗೆ ದಾನ ಮಾಡಿದ್ದಾರೆ ಮೌಸುಮಿ.