ನವದೆಹಲಿ: ಕರ್ನಾಟಕದ ಡ್ರೆಸ್ ಕೋಡ್ ವಿವಾದದ ಬಗ್ಗೆ ಕೆಲವು ದೇಶಗಳ ಟೀಕೆಗಳ ಕುರಿತು ತನ್ನ ನಿಲುವನ್ನು ಗುರುವಾರ ಪುನರುಚ್ಚರಿಸಿರುವ ಕೇಂದ್ರ ವಿದೇಶಾಂಗ ಸಚಿವಾಲಯವು, ಭಾರತದ ಆಂತರಿಕ ವಿಚಾರಗಳ ಕುರಿತು ಹೊರ ರಾಷ್ಟ್ರಗಳ ಪ್ರತಿಕ್ರಿಯೆ ಸ್ವಾಗತಾರ್ಹವಲ್ಲ ಎಂದು ಗುರುವಾರ ಹೇಳಿದೆ.
ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಅವರು ಮಾತನಾಡಿ, ಇದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿಷಯವಲ್ಲ. ಭಾರತದ ಆಂತರಿಕ ವಿಷಯವಾಗಿರುವುದರಿಂದ ಬೇರೆ ದೇಶದಿಂದ ಹಾಗೂ ಹೊರಗಿನವರಿಂದ ಯಾವುದೇ ಪ್ರತಿಕ್ರಿಯೆ ಸ್ವಾಗತಾರ್ಹವಲ್ಲ ಎಂದು ಹೇಳಿದ್ದಾರೆ.
ಭಾರತದಲ್ಲಿ ಸಾಂವಿಧಾನಿಕ ಕಾರ್ಯವಿಧಾನ, ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ತತ್ವವಿದೆ. ಅದು ಅಂತಹ ವಿಷಯಗಳಿಗೆ ಪರಿಹಾರಗಳನ್ನು ಹುಡುಕಲು ನಮಗೆ ಚೌಕಟ್ಟನ್ನು ನೀಡುತ್ತದೆ. ಈ ವಿಷಯವನ್ನು ಈಗ ಕರ್ನಾಟಕ ಹೈಕೋರ್ಟ್ ಪರಿಶೀಲಿಸುತ್ತಿದೆ. ಭಾರತದ ಸಂವಿಧಾನ ಮತ್ತು ಅದರ ಜನರಿಗೆ ಸಂಬಂಧಿಸಿದ ಆಂತರಿಕ ಸಮಸ್ಯೆಗಳು ಮತ್ತು ವಿಷಯಗಳ ಕುರಿತು ಹೊರಗಿನವರ ಪ್ರತಿಕ್ರಿಯೆ ಸ್ವೀಕಾರಾರ್ಹವಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಭಾರತದ ಆಂತರಿಕ ವಿಚಾರದ ಕುರಿತು ಪಾಕಿಸ್ತಾನವನ್ನು ಒಳಗೊಂಡ ಮುಸ್ಲಿಂ ಬಾಹುಳ್ಯದ ದೇಶಗಳ ಸಂಘಟನೆ ನೀಡಿರುವ ಹೇಳಿಕೆಯನ್ನು ಭಾರತ ಬಲವಾಗಿ ಖಂಡಿಸಿತ್ತು.
ಉತ್ತರಾಖಂಡದ ಹರಿದ್ವಾರದಲ್ಲಿನ ಧರ್ಮ ಸಂಸದ್ನಲ್ಲಿ ಮಾಡಿದ ದ್ವೇಷ ಭಾಷಣಗಳನ್ನು ಉಲ್ಲೇಖಿಸಿರುವ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) 'ಹಿಂದುತ್ವ ಪ್ರತಿಪಾದಕರಿಂದ ಮುಸ್ಲಿಮರ ಹತ್ಯಾಕಾಂಡಕ್ಕೆ ಸಾರ್ವಜನಿಕವಾಗಿ ಕರೆ ನೀಡಿರುವುದು ಕಳವಳಕಾರಿ' ಎಂದು ಹೇಳಿತ್ತು.
ಇದಕ್ಕೆ ಕಠಿಣ ಪದಗಳಿಂದ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಸಚಿವಾಲಯ, ಸಾಂವಿಧಾನಿಕ ಚೌಕಟ್ಟು ಮತ್ತು ಯಾಂತ್ರಿಕತೆಗಳು ಹಾಗೂ ಪ್ರಜಾಸತ್ತಾತ್ಮಕ ತತ್ವಗಳು ಮತ್ತು ರಾಜ್ಯ ವ್ಯವಸ್ಥೆಗಳಿಗೆ ಅನುಗುಣವಾಗಿ ಭಾರತದಲ್ಲಿನ ವಿಚಾರಗಳನ್ನು ಪರಿಗಣಿಸುತ್ತದೆ ಮತ್ತು ಬಗೆಹರಿಸುತ್ತದೆ. ಒಐಸಿ ಕಾರ್ಯಾಲಯದ ಕೋಮುವಾದಿ ಮನಸ್ಥಿತಿಯು ಈ ವಾಸ್ತವ ಅಂಶಗಳ ಸೂಕ್ತ ಪರಿಗಣನೆಗೆ ಅವಕಾಶ ನೀಡುವುದಿಲ್ಲ. ಭಾರತದ ವಿರುದ್ಧದ ಮಹಾಪಾತಕ ಪ್ರಚಾರಗಳನ್ನು ಮುಂದುವರಿಸಲು ಒಐಸಿ ಪಟ್ಟಭದ್ರ ಹಿತಾಸಕ್ತಿಗಳಿಂದ ಹೈಜಾಕ್ ಆಗುವುದು ಮುಂದುವರಿದಿದೆ ಎಂದಿತ್ತು.

