ನವದೆಹಲಿ: ರಷ್ಯಾ ಉಕ್ರೇನ್ ಯುದ್ಧದ ಹಿನ್ನಲೆಯಲ್ಲಿ ಭಾರತ ಸರ್ಕಾರ ನೀಡಿದ್ದ ಮೊದಲ ಮುನ್ಸೂಚನೆ ಬಳಿಕ ಈ ವರೆಗೂ ಉಕ್ರೇನ್ ನಲ್ಲಿದ್ದ ಸುಮಾರು 18 ಸಾವಿರ ಭಾರತೀಯರನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಉಕ್ರೇನ್ ರಾಜಧಾನಿ ಕೀವ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಮೊದಲ ಮುನ್ನೆಚ್ಚರಿಕೆ ನೀಡಿದ ಬಳಿಕ ಈ ವರೆಗೂ ಒಟ್ಟು 18,000 ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ಸಂಘರ್ಷ ಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ತವರಿಗೆ ಕರೆ ತರಲು ಆರಂಭಿಸಲಾಗಿರುವ ಆಪರೇಷನ್ ಗಂಗಾ ಕಾರ್ಯಾಚರಣೆ ಮುಂದುವರೆದಿದ್ದು, ಮೂರು ಐಎಎಫ್ ಸಿ-17 ಮತ್ತು ಏರ್ ಇಂಡಿಯಾ, ಇಂಡಿಗೋ, ಸ್ಪೈಸ್ ಜೆಟ್, ಗೋ ಫಸ್ಟ್ ಮತ್ತು ಗೋ ಏರ್ನಂತಹ ಇತರ ವಾಣಿಜ್ಯ ವಿಮಾನಗಳು ಸೇರಿದಂತೆ 18 ವಿಮಾನಗಳನ್ನು ಮುಂದಿನ 24 ಗಂಟೆಗಳ ಕಾರ್ಯಾಚರಣೆಗೆ ನಿಗದಿಪಡಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಅವರು, 'ನಮ್ಮ ಮೊದಲ ಸಲಹೆ ಬಿಡುಗಡೆಯಾದಾಗಿನಿಂದ ಒಟ್ಟು 18,000 ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ಆಪರೇಷನ್ ಗಂಗಾ ಅಡಿಯಲ್ಲಿ 30 ವಿಮಾನಗಳು ಇದುವರೆಗೆ 6,400 ಭಾರತೀಯರನ್ನು ಉಕ್ರೇನ್ನಿಂದ ಮರಳಿ ಕರೆತಂದಿವೆ. ಮುಂದಿನ 24 ಗಂಟೆಗಳಲ್ಲಿ, 18 ವಿಮಾನಗಳನ್ನು ಕಾರ್ಯಾಚರಣೆಗೆ ನಿಗದಿಪಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 30 ವಿಮಾನಗಳು ಆಪರೇಷನ್ ಗಂಗಾ ಭಾಗವಾಗಿದೆ. ಇವುಗಳಲ್ಲಿ ಸುಮಾರು 6,400 ಭಾರತೀಯ ನಾಗರಿಕರು ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ನಾವು ಪೂರ್ವ ಉಕ್ರೇನ್, ಖಾರ್ಕಿವ್ನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದೇವೆ. ನಾವು ಪ್ರಸ್ತುತ ಪಶ್ಚಿಮ ಉಕ್ರೇನ್ ನಲ್ಲಿ ಭಾರತೀಯರನ್ನು ಸ್ಥಳಾಂತರಿಸಲು ಸಾರಿಗೆ ಆಯ್ಕೆಗಳನ್ನು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.




