ನವದೆಹಲಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ, ಮುಂಬೈನ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಅವರನ್ನು ಸುಮಾರು 6 ಗಂಟೆ ವಿಚಾರಣೆಗೆ ಒಳಪಡಿಸಿತು.
ಭ್ರಷ್ಟಾಚಾರ ಆರೋಪ ಪ್ರಕರಣವು ಬಾಂಬೆ ಹೈಕೋರ್ಟ್ ವಿಚಾರಣೆಯಲ್ಲಿ ಇದ್ದಾಗಲೇ, ದೇಶ್ಮುಖ್ ವಿರುದ್ಧದ ದೂರು ಹಿಂಪಡೆಯುವಂತೆ ಮಾಜಿ ಪೊಲೀಸ್ ಕಮಿಷನರ್ ಪರಂವೀರ್ ಸಿಂಗ್ ಅವರ ಮೇಲೆ ಒತ್ತಡ ಹೇರಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು.
ಪೊಲೀಸ್ ಕಮಿಷನರ್ ಸ್ಥಾನದಿಂದ ಪದಚ್ಯುತಗೊಂಡ ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರವನ್ನು ಬರೆದಿದ್ದ ಪರಂವೀರ್ ಸಿಂಗ್ ಅವರು, ಆಗ ಗೃಹ ಸಚಿವರಾಗಿದ್ದ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಎಸಗಿದ್ದರು.
ಮೇಲ್ನೋಟಕ್ಕೆ ಈ ಆರೋಪದಲ್ಲಿ ಹುರುಳಿದೆ ಎಂಬುದು ದೃಢಪಟ್ಟಿದ್ದು, ಹೀಗಾಗಿ, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಐಪಿಸಿಯ ಕ್ರಿಮಿನಲ್ ಸಂಚು ಸೆಕ್ಷನ್ ಅನ್ವಯ ದೇಶ್ಮುಖ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.