ಮೋರ್ಬಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಗುಜರಾತ್ನ ಮೋರ್ಬಿ ಜಿಲ್ಲೆಯಲ್ಲಿ 108 ಅಡಿ ಎತ್ತರದ ಆಂಜನೇಯನ ಮೂರ್ತಿಯನ್ನು ಉದ್ಘಾಟನೆ ಮಾಡಿದ್ದಾರೆ.
ಹನುಮ ಜಯಂತಿ ಹಿನ್ನೆಲೆಯಲ್ಲಿ ಈ ಪ್ರತಿಮೆಯನ್ನು ವರ್ಚುವಲ್ ಮೂಲಕ ಪ್ರಧಾನಿ ಮೋದಿಯವರು ಅನಾವರಣಗೊಳಿಸಿದ್ದಾರೆ.
ಈ ವೇಳೆ ಮಾತನಾಡಿರುವ ಮೋದಿಯವರು, ಹಲವು ವರ್ಷಗಳಿಂದ ಶಿಮ್ಲಾದಲ್ಲಿ ಬೃಹತ್ ಹನುಮನ ಪ್ರತಿಮೆಯನ್ನು ನೋಡುತ್ತಲಿದ್ದೇವೆ. ಎರಡನೆಯ ಬೃಹತ್ ಪ್ರತಿಮೆಯನ್ನು ಇಂದು ಮೋರ್ಬಿಯಲ್ಲಿ ಅನಾವರಣಗೊಳಿಸಲಾಗಿದೆ. ರಾಮೇಶ್ವರಂ ಮತ್ತು ಪಶ್ಚಿಮ ಬಂಗಾಳದಲ್ಲಿ ಇನ್ನೂ ಎರಡು ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಮ್ ಕಥಾ ಕಾರ್ಯಕ್ರಮವನ್ನು ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದೆ. ಯಾವುದೇ ಭಾಷೆ ಅಥವಾ ಉಪಭಾಷೆಯಾಗಿರಲಿ, ರಾಮ್ ಕಥಾದ ಆತ್ಮವು ಎಲ್ಲರನ್ನೂ ಒಂದುಗೂಡಿಸುತ್ತದೆ. ದೇವರ ಮೇಲಿನ ಭಕ್ತಿಯೊಂದಿಗೆ ಒಂದುಗೂಡಿಸುತ್ತದೆ. ಇದು ಭಾರತೀಯ ನಂಬಿಕೆಯ ಶಕ್ತಿ, ನಮ್ಮ ಆಧ್ಯಾತ್ಮಿಕತೆ, ನಮ್ಮ ಸಂಸ್ಕೃತಿ ಮತ್ತು ನಮ್ಮ ಸಂಪ್ರದಾಯವಾಗಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಮೋದಿಯವರು, ಇಂದು ಹನುಮಾನ್ ಜಯಂತಿ. ಬೆಳಗ್ಗೆ 11 ಗಂಟೆಗೆ ಹನುಮಾನ್ ವಿಗ್ರಹವನ್ನು ಲೋಕಾರ್ಪಣೆಗೊಳಿಸುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಆಂಜನೇಯನ ವಿಗ್ರಹವನ್ನು ಅನಾವರಣಗೊಳಿಸುತ್ತಿರುವುದು ನನಗೆ ಸಂದ ಗೌರವ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು. ಇದೀಗ ಉದ್ಘಾಟನಾ ಸಮಾರಂಭದ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
ಹನುಮಂತನ ಈ ವಿಗ್ರಹವನ್ನು ಗುಜರಾತ್ನ ಪಶ್ಚಿಮದ ಮೋರ್ಬಿ ಜಿಲ್ಲೆಯಲ್ಲಿನ ಪರಮಪೂಜ್ಯ ಬಾಪು ಕೇಶವಾನಂದ ಆಶ್ರಮದಲ್ಲಿ ನಿರ್ಮಿಸಲಾಗಿದೆ. ದೇಶದ ನಾಲ್ಕು ದಿಕ್ಕುಗಳಿಗೆ ನಾಲ್ಕು ಹನುಮಂತನ ಪ್ರತಿಮೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಅದಕ್ಕೆ ಹನುಮಾನ್ ಜಿ ಚಾರ್ ಧಾಮ್ ಎಂದು ಹೆಸರಿಸಲಾಗಿದೆ.
ಈ ನಾಲ್ಕು ಹನುಮಾನ್ ಪ್ರತಿಮೆಗಳಲ್ಲಿ ಗುಜರಾತ್ನ ಮೋರ್ಬಿಯಲ್ಲಿ ಅನಾವರಣಗೊಂಡಿದ್ದು ಎರಡನೇಯದು. ಅಂದಹಾಗೇ, ಮೊದಲನೇಯದ್ದು ಶಿಮ್ಲಾದಲ್ಲಿ (ಉತ್ತರ) 2010ರಲ್ಲಿ ನಿರ್ಮಾಣಗೊಂಡಿದೆ. ಇನ್ನು ದಕ್ಷಿಣ ದಿಕ್ಕಿನಲ್ಲಿ ರಾಮೇಶ್ವರಂನಲ್ಲಿ ಒಂದು ಹನುಮಾನ್ ವಿಗ್ರಹ ನಿರ್ಮಾಣಗೊಳ್ಳಲಿದ್ದು, ಅದರ ಕಾರ್ಯವೂ ಶುರುವಾಗಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.