ವಿಜಯನಗರ: ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪ್ರಸಕ್ತ ಸಾಲಿನ ನಾಡೋಜ ಪ್ರಶಸ್ತಿ ಪ್ರಕಟ ಮಾಡಿದ್ದು, ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಭಾಷ್ಯಂ ಸ್ವಾಮಿ ಹಾಗೂ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.
ಈ ಹಿಂದೆ ಪ್ರಶಸ್ತಿ ಆಯ್ಕೆಗಾಗಿ ಸಾಹಿತಿಗಾಳದ ಜಿ. ಕೃಷ್ಣಪ್ಪ, ಮಲೆಯೂರು ಗುರುಸ್ವಾಮಿ, ಡಾ. ಎಸ್.ಸಿ. ಶರ್ಮಾ, ಗುರುಲಿಂಗ ಕಾಪಸೆ, ಡಾ. ಶಿವಾನಂದ ನಾಯಕ, ರಮೇಶ ಎಂ.ಕೆ,., ನಾಸೀರ್ ಅಹಮ್ಮದ್ ಸೇರಿದಂತೆ ಒಟ್ಟು ಹತ್ತು ಜನರ ಹೆಸರನ್ನು ನಾಡೋಜಕ್ಕೆ ಶಿಫಾರಸು ಮಾಡಲಾಗಿತ್ತು. ಅಂತಿಮವಾಗಿ ರಾಜ್ಯಪಾಲರು ಮೂವರ ಹೆಸರಿಗೆ ಅಂಕಿತ ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ ಅವರು, ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಏಪ್ರಿಲ್ 12ರಂದು ಸಂಜೆ 5.30ಕ್ಕೆ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ ನುಡಿಹಬ್ಬದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ನಾಡೋಜ ಪ್ರದಾನ ಮಾಡುವರು.
ಚಿತ್ರದುರ್ಗದ ಮುರುಘಾ ಶರಣರು, ಪತ್ರಕರ್ತ ಪದ್ಮರಾಜ ದಂಡಾವತಿ, ಕೆಂಪೇಗೌಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಬಿ.ಎಸ್. ಪುಟ್ಟಸ್ವಾಮಿ, ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ ಹೆಗಡೆ ಅವರಿಗೆ ಡಿ.ಲಿಟ್ ಹಾಗೂ 1387 ವಿದ್ಯಾರ್ಥಿಗಳಿಗೆ ವಿವಿಧ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ.. ಸಿ.ಎನ್. ಅಶ್ವತ್ಥನಾರಾಯಣ ಪ್ರದಾನ ಮಾಡುವರು. ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ವಿ. ಕಟ್ಟೀಮನಿ ಘಟಿಕೋತ್ಸವ ಭಾಷಣ ಮಾಡುವರು ಎಂದು ವಿವರಿಸಿದರು.




.jpg)
