ಕಾಸರಗೋಡು: ಕಾಸರಗೋಡಿನ ಕ್ರೀಡಾ ಕ್ಷೇತ್ರವನ್ನು ವಿಸ್ತರಿಸಲು ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಬಂದರು, ವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಸಚಿವ ಅಹಮದ್ ದೇವರ ಕೋವಿಲ್ ಹೇಳಿದರು.
ಕ್ರೀಡಾಳುಗಳು, ಅಭಿಮಾನಿಗಳು ಕೋಮುವಾದಿಗಳಾಗಿ ಬೆಳೆಯಲು ಸಾಧ್ಯವಿಲ್ಲ ಎಂದರು. ಕೋಳಿಯಡ್ಕ ಬಳಿ ಹಿಂದೂಸ್ತಾನ್ ಏರೋನಾಟಿಕ್ಸ್ ನ ಸಿಎಸ್ ಆರ್ ನಿಧಿಯಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ಜಿಲ್ಲೆಯ ಪ್ರಥಮ ಕ್ರೀಡಾ ತರಬೇತಿ ಸೌಕರ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಟದ ಮೈದಾನಗಳು ಏಕತೆಯ ಸಂದೇಶಗಳನ್ನು ಹರಡುವ ಸ್ಥಳಗಳಾಗಿವೆ. ಜಾತಿ, ಧರ್ಮ, ರಾಷ್ಟ್ರದ ವಿಚಾರದಲ್ಲಿ ಜಗಳವಾಡುತ್ತಿರುವ ಸಮಾಜದಲ್ಲಿ ಕ್ರೀಡಾ ಪ್ರತಿಭೆಗಳು ಮಾದರಿಯಾಗಬಲ್ಲವು. ಉತ್ತಮ ಪ್ರತಿಭೆಗಳಾಗುವ ಜತೆಗೆ ಸಾಮಾಜಿಕ ಬದ್ಧತೆಯೊಂದಿಗೆ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದರು. ಕಾಸರಗೋಡಿನ ಕ್ರೀಡಾ ನಕ್ಷೆಯನ್ನು ವಿಸ್ತರಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಚೆಮ್ಮನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಫೈಜಾ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಪಿ.ಹಬೀಬ್ ರೆಹಮಾನ್ ಅವರು ಎಚ್ಎಎಲ್ ಏವಿಯಾನಿಕ್ಸ್ ಕ್ಲಾಸ್ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಎ.ವಿ.ಮುರಳಿಕೃಷ್ಣನ್ ಅವರಿಂದ ಕೀಲಿಕೈಗಳÀನ್ನು ಸ್ವೀಕರಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಹಣಕಾಸು ಅಧಿಕಾರಿ ಎಂ.ಶಿವಪ್ರಕಾಶ ನಾಯರ್ ವರದಿ ಮಂಡಿಸಿದರು. ಪಂಚಾಯಿತಿ ಸದಸ್ಯ ಇ. ಮನೋಜ್ ಕುಮಾರ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನನ್, ಎಚ್.ಎ.ಎಲ್ ಉಪ ಪ್ರಧಾನ ವ್ಯವಸ್ಥಾಪಕ ಎ.ಎಸ್.ಸಾಜಿ, ಜಿಲ್ಲಾ ಕ್ರೀಡಾ ಪರಿಷತ್ತಿನ ಉಪಾಧ್ಯಕ್ಷ ಪಿ.ಪಿ.ಅಶೋಕನ್, ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಮುನೀರ್ ವಡಕ್ಕುಂಪಾಡ್ ಮಾತನಾಡಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಸ್ವಾಗತಿಸಿ, ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯದರ್ಶಿ ಎಂ.ಎಸ್.ಸುದೀಪ್ ಬೋಸ್ ವಂದಿಸಿದರು.
ಕೋಳಿಯಡ್ಕ ಸ್ಟೇಡಿಯಂ ಬಳಿ ನಿರ್ಮಿಸಲಾಗಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ ಕ್ರೀಡಾಪಟುಗಳು ಉಳಿದುಕೊಂಡು ತರಬೇತಿ ಪಡೆಯಬಹುದು. ಕಟ್ಟಡವು ನಾಲ್ಕು ಮಲಗುವ ಕೋಣೆಗಳು, ಎರಡು ಅಡಿಗೆಮನೆಗಳು, ಏಳು ಸ್ನಾನಗೃಹಗಳು ಮತ್ತು ಊಟದ ಕೋಣೆಯನ್ನು ಹೊಂದಿದೆ ಮತ್ತು 20 ಜನರಿಗೆ ಅವಕಾಶ ಕಲ್ಪಿಸುತ್ತದೆ. 50 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ.






