ವಾರಣಾಸಿ: ಗ್ಯಾನ್ ವಾಪಿ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ವಿರೋಧಿಸಿ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದ್ದರ ಪರಿಣಾಮ ವಾರಣಾಸಿಯ ಕೋರ್ಟ್ ನಲ್ಲಿ ಗ್ಯಾನ್ ವಾಪಿಗೆ ಸಂಬಂಧಿಸಿದ ವಿಚಾರಣೆಯಲ್ಲಿ ವ್ಯತ್ಯಯ ಉಂಟಾಗಿದೆ.
ಬುಧವಾರ ಗ್ಯಾನ್ ವಾಪಿಗೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕಿತ್ತು. ವಕೀಲರ ವಿರುದ್ಧ ವಿಶೇಷ ಕಾರ್ಯದರ್ಶಿಯೊಬ್ಬರು ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಬನಾರಸ್ ಬಾರ್ ಅಸೋಸಿಯೇಷನ್ ಹಾಗೂ ಕೇಂದ್ರ ಬಾರ್ ಅಸೋಸಿಯೇಷನ್ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿದ್ದವು. ಆದ್ದರಿಂದ ಕೋರ್ಟ್ ನಲ್ಲಿ ವಿಚಾರಣೆ ನಡೆದಿಲ್ಲ ಎಂದು ಮುಸ್ಲಿಮರ ಪರ ವಾದ ಮಂಡಿಸುತ್ತಿರುವ ಅಭಯ್ ಯಾದವ್ ಹೇಳಿದ್ದಾರೆ. ಫಫಪ
ಮುಸ್ಲಿಮರು ಜಿಲ್ಲಾ ಸಿವಿಲ್ ನ್ಯಾಯಾಧೀಶರಾದ ರವಿ ಕುಮಾರ್ ದಿವಾಕರ್ ಅವರ ಬಳಿ, ಹಿಂದೂಗಳ ಅರ್ಜಿಗೆ ತಮ್ಮ ಆಕ್ಷೆಪಣೆ ಸಲ್ಲಿಸುವುದಕ್ಕೆ 2 ದಿನಗಳ ಕಾಲಾವಕಾಶ ಕೋರಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.
ಹಿಂದೂಗಳ ಪರ ವಾದ ಮಂಡಿಸಿರುವ ಮದನ್ ಮೋಹನ್ ಯಾದವ್ ಮಾತನಾಡಿ, ವಕೀಲರು ವಾದ ಮಂಡಿಸಲು ಬಾರ್ ಅಸೋಸಿಯೇಷನ್ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಕೋರ್ಟ್ ಮತ್ತೆ ಪುನಾರಂಭಗೊಂಡ ಬಳಿಕ ಅರ್ಜಿ ವಿಚಾರಣೆಗೆ ಬರಲಿದೆ.