HEALTH TIPS

ಸುಧಾರಣೆಯಾಗದ ವಾಯು ಗುಣಮಟ್ಟ: ಕೇಂದ್ರ ಅತೃಪ್ತಿ- ವಿಶೇಷ ವರದಿ

 ನವದೆಹಲಿ: 15ನೇ ಹಣಕಾಸು ಆಯೋಗದ ಅನುದಾನದಡಿ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ ಸೇರಿದಂತೆ ದೇಶದ 42 ನಗರಗಳಲ್ಲಿ ಅನುಷ್ಠಾನಗೊಳಿಸಿರುವ ವಾಯು ಗುಣಮಟ್ಟ ಸುಧಾರಣೆ ಯೋಜನೆಯಲ್ಲಿ ಗಮನಾರ್ಹ ಪ್ರಗತಿ ಕಾಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, 2022-23ನೇ ಸಾಲಿನ ಅನುದಾನ ಬಿಡುಗಡೆಗೆ ಹಲವಾರು ಷರತ್ತುಗಳನ್ನು ವಿಧಿಸಿದೆ.

ವಾಯುಮಾಲಿನ್ಯ ಹೆಚ್ಚಳದಿಂದ ತೀವ್ರವಾಗಿ ತತ್ತರಿಸಿದ್ದ ನವದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶಿತ ಪರಿಸರ ಮಾಲಿನ್ಯ (ತಡೆಗಟ್ಟುವಿಕೆ ಹಾಗೂ ನಿಯಂತ್ರಣ) ಪ್ರಾಧಿಕಾರವು ಚಿಕ್ಕಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ 2019ರ ಅಕ್ಟೋಬರ್‌- ನವೆಂಬರ್‌ ತಿಂಗಳಲ್ಲಿ ಆರೋಗ್ಯ ತುರ್ತು ಸ್ಥಿತಿಯನ್ನು ಘೋಷಿಸಿತ್ತು. ಈ ಬೆಳವಣಿಗೆ ಬಳಿಕ ದೇಶದ ಮಹಾನಗರಗಳ ವಾಯು ಗುಣಮಟ್ಟ ಕಾಪಾಡುವುದರ ಬಗ್ಗೆ ಕೇಂದ್ರ ಸರ್ಕಾರವೂ ಗಂಭೀರವಾಗಿ ಪರಿಗಣಿಸಿತ್ತು.

15ನೇ ಹಣಕಾಸು ಆಯೋಗವು ಮಹಾನಗರಗಳ ವಾಯು ಗುಣಮಟ್ಟ ಕಾಪಾಡಲು 2021-22ರಿಂದ 2025-26ರ ವರೆಗೆ ವಿಶೇಷ ಅನುದಾನ ಒದಗಿಸುತ್ತಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯವನ್ನು ನೋಡಲ್‌ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ವಾಯು ಗುಣಮಟ್ಟ ಸುಧಾರಣೆಗಾಗಿ 42 ನಗರಗಳಿಗೆ 2021-22ನೇ ಸಾಲಿನಲ್ಲಿ ₹1,833 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಬಳಿಕ 28 ನಗರಗಳಿಗೆ ₹192 ಕೋಟಿ ಬಿಡುಗಡೆ ಮಾಡಲಾಗಿತ್ತು.

ವಾಯುಮಾಲಿನ್ಯದ ಮೂಲ ಪತ್ತೆ ಹಚ್ಚಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ ಮಾಡಲು ಹಾಗೂ ವಾತಾವರಣದ ಗಾಳಿಯ ಗುಣಮಟ್ಟದ ಮೇಲೆ ನಿಗಾ ಇಡಲು ಬಿಬಿಎಂಪಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ₹ 279 ಕೋಟಿ ವೆಚ್ಚದ ಕಾರ್ಯಯೋಜನೆ ಸಿದ್ಧಪಡಿಸಿವೆ. ಇದರ ಮೊದಲ ಕಂತಿನ ರೂಪದಲ್ಲಿ ಕೇಂದ್ರ ಸರ್ಕಾರವು ₹ 139 ಕೋಟಿ ಅನುದಾನ ಮಂಜೂರು ಮಾಡಿದೆ.

ಈ ಕಾರ್ಯಕ್ರಮಗಳಿಂದಾಗಿ ವಾಯು ವಿನ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಆಗಿರುವುದನ್ನು ಮನದಟ್ಟು ಮಾಡಿಕೊಡಬೇಕು. ಆಗ ಮಾತ್ರ ಎರಡನೇ ಕಂತಿನ ಹಣ ಬಿಡುಗಡೆಯಾಗುತ್ತದೆ ಎಂದೂ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ವೇಳೆ ಸ್ಪಷ್ಟಪಡಿಸಿತ್ತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ. ಶಾಂತ್‌ ಎ.ತಿಮ್ಮಯ್ಯ ಅವರಿಗೆ ಪತ್ರ ಬರೆದಿರುವ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನರೇಶ್‌ ಪಾಲ್‌ ಗಂಗ್ವಾರ್ ಅವರು, 2021-22ನೇ ಸಾಲಿನ ಯೋಜನಾ ಪ್ರಗತಿಯ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಜತೆಗೆ, ಯೋಜನೆಯ ಸೂಕ್ಷ್ಮ ಕ್ರಿಯಾಯೋಜನೆಯನ್ನು ಸಲ್ಲಿಸಬೇಕು. ಅನುದಾನದ ವರ್ಗಾ ವಣೆ ಪ್ರಮಾಣಪತ್ರ, ಅನುದಾನದ ಬಳಕೆ ಪ್ರಮಾಣ ಪತ್ರ ಒದಗಿಸಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.

ನಾಳೆ ಪ್ರಗತಿ ಪರಿಶೀಲನಾ ಸಭೆ: 42 ನಗರಗಳಲ್ಲಿ ಯೋಜನೆಯಲ್ಲಾದ ಪ್ರಗತಿ ಹಾಗೂ 2022-23ನೇ ಸಾಲಿನ ಅನುದಾನ ಬಿಡುಗಡೆ ಬಗ್ಗೆ ಚರ್ಚಿಸಲು ನರೇಶ್‌ ಪಾಲ್‌ ಗಂಗ್ವಾರ್‌ ಅಧ್ಯಕ್ಷತೆಯಲ್ಲಿ ಸಭೆ ಇದೇ 29ರಂದು ನಿಗದಿಯಾಗಿದೆ. ಯೋಜನೆಯಲ್ಲಿನ ಪ್ರಗತಿ, ವಾಯು ಗುಣಮಟ್ಟದಲ್ಲಾದ ಸುಧಾರಣಾ ವರದಿಯನ್ನು ಸಭೆಯಲ್ಲಿ ಪ್ರಸ್ತುತಪಡಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆಯ ‍ಪ್ರಧಾನ ಕಾರ್ಯದರ್ಶಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ಸೂಚಿಸಲಾಗಿದೆ.

15ನೇ ಹಣಕಾಸು ಆಯೋಗದಡಿ ಅನುದಾನ

2021-22ನೇ ಸಾಲಿನಲ್ಲಿ 42 ನಗರಗಳಿಗೆ ₹1,833 ಕೋಟಿ

ನಾಳೆ ಯೋಜನೆಯ ಪ್ರಗತಿ ಪರಿಶೀಲನೆ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries