ಪತ್ತನಂತಿಟ್ಟ: ವಯನಾಡ್ನಲ್ಲಿರುವ ಸಂಸದ ರಾಹುಲ್ ಗಾಂಧಿಯವರ ಕಚೇರಿ ಮೇಲೆ ದಾಳಿ ನಡೆಸಿದ ಗುಂಪಿನಲ್ಲಿದ್ದ ಅವಿಶಿತ್ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ವೈಯಕ್ತಿಕ ಸಿಬ್ಬಂದಿಯಾಗಿದ್ದವ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ವೈಯಕ್ತಿಕ ಕಾರಣಗಳಿಗಾಗಿ ಆತನನ್ನು ಈ ತಿಂಗಳ ಆರಂಭದಲ್ಲಿ ವಜಾಗೊಳಿಸಲಾಗಿತ್ತು ಎಂದು ಸಚಿವೆ ಇದೀಗ ಸಮಜಾಯಿಷಿ ನೀಡಿದ್ದಾರೆ. ಅವಿಶಿತ್ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು. ದಾಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವೀಣಾ ಜಾರ್ಜ್ ಹೇಳಿದ್ದಾರೆ. ಕೆ.ಆರ್.ಅವಿಶಿತ್ ಎಸ್ಎಫ್ಐನ ಮಾಜಿ ಜಿಲ್ಲಾ ಉಪಾಧ್ಯಕ್ಷ.
ಇದೇ ವೇಳೆ ಪೋಲೀಸರಿಗೂ ಬೆದರಿಕೆ ಹಾಕಿದ್ದಾನೆ. ಕೇರಳದ ಪೋಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಸಂರಕ್ಷಿಸುವ ಉದ್ದೇಶ ಹೊಂದಿದ್ದರೆ, ನಮಗೆ ರಕ್ಷಣೆ ಹೇಗೆ ಉಳಿಸಿಕೊಳ್ಳಬೇಕೆಂಬುದು ಗೊತ್ತೆಂದು ಅವಿಶಿತ್ ಫೇಸ್ಬುಕ್ನಲ್ಲಿ ಬರೆದಿದ್ದ. ರಾಹುಲ್ ಗಾಂಧಿ ಕಚೇರಿ ಮೇಲೆ ದಾಳಿ ನಡೆಸಿದ ಅವಿಶಿತ್ ನನ್ನು ಪೋಲೀಸರು ಬಂಧಿಸಿದ್ದಾರೆ.
ಆರೋಗ್ಯ ಸಚಿವರ ಆಪ್ತ ಸಿಬ್ಬಂದಿಯೊಬ್ಬರು ಈ ಗ್ಯಾಂಗ್ನ ಭಾಗವಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ನಿನ್ನೆಯೇ ಆರೋಪಿಸಿದ್ದರು. ರಾಹುಲ್ ಗಾಂಧಿ ಕಚೇರಿ ಮೇಲೆ ದಾಳಿ ನಡೆದಿರುವುದು ಮುಖ್ಯಮಂತ್ರಿಗೆ ಗೊತ್ತಿದೆ ಎಂದು ವಿರೋಧ ಪಕ್ಷದ ನಾಯಕ ಹೇಳಿದ್ದಾರೆ. ಕಚೇರಿ ದಾಳಿಗೆ ಸಂಬಂಧಿಸಿದಂತೆ ಇದುವರೆಗೆ 25 ಮಂದಿಯನ್ನು ಬಂಧಿಸಲಾಗಿದೆ.