ನವದೆಹಲಿ: ದೇಶದ 15ನೇ ರಾಷ್ಟ್ರಪತಿಯಾಗಿ, ದ್ರೌಪದಿ ಮುರ್ಮು ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಬುಡಕಟ್ಟು ಜನಾಂಗದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಡೆದಿರುವ ಇವರು, ಎರಡನೆಯ ಮಹಿಳಾ ರಾಷ್ಟ್ರಪತಿ ಎನಿಸಿದ್ದಾರೆ.
ಅಷ್ಟಕ್ಕೂ ಕುತೂಹಲ ಎನ್ನುವ ಅಂಶವೊಂದು ಭಾರತದ ರಾಷ್ಟ್ರಪತಿಯ ಸ್ಥಾನಕ್ಕಿದೆ. ಅದು ಪ್ರಮಾಣ ವಚನ ಸ್ವೀಕರಿಸುವ ದಿನದ ಕುರಿತು. 1977ರಿಂದಲೂ ಇದೇ ದಿನ ಅಂದರೆ ಜುಲೈ 25ರಂದೇ ಪ್ರಮಾಣ ವಚನವನ್ನು ಭಾರತದ ರಾಷ್ಟ್ರಪತಿಗಳು ಸ್ವೀಕರಿಸುತ್ತಾರೆ.
ಇದು ಕುತೂಹಲದ ಅಂಶವಾದರೆ ಇದಕ್ಕೇನು ನಿಯಮವಾಗಲಿ ಅಥವಾ ಇಂದೇ ಪ್ರಮಾಣವಚನ ಸ್ವೀಕರಿಸಬೇಕು ಎಂಬ ಕಾನೂನೇನೂ ಇಲ್ಲ. ಯಾವುದೇ ಲಿಖಿತ ನಿಯಮಗಳೂ ಇಲ್ಲ. ಆದರೆ 1977ರಿಂದಲೂ ಇದೇ ದಿನವನ್ನು ವಿಶೇಷ ದಿನವೆಂದು ಪರಿಗಣಿಸಲಾಗುತ್ತಿದೆ.
ಮೊದಲೇ ಹೇಳಿದ ಹಾಗೆ ಜುಲೈ 25ರ ನಂಟು ಶುರುವಾಗಿದ್ದು 1977ರಲ್ಲಿ. ಅಂದು ಭಾರತದ 6ನೇ ರಾಷ್ಟ್ರಪತಿಯಾಗಿ ನೀಲಂ ಸಂಜೀವ ರೆಡ್ಡಿ ಅಧಿಕಾರ ಸ್ವೀಕರಿಸಿದ್ದರು. ತದನಂತರ ರಾಷ್ಟ್ರಪತಿ ಹುದ್ದೆ ಏರಿದ ಗಿಯಾನಿ ಜೈಲ್ ಸಿಂಗ್, ಆರ್.ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ, ಕೆ.ಆರ್.ನಾರಾಯಣನ್, ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಮತ್ತು ರಾಮನಾಥ್ ಕೋವಿಂದ್ ಅವರು ಕೂಡ ಜುಲೈ 25ರಂದೇ ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸಿದರು.