ಕಾಸರಗೋಡು: 2022-2023ರ ವಾರ್ಷಿಕ ಯೋಜನೆಯಲ್ಲಿ ರಸ್ತೆ ನಿರ್ಮಾಣಕ್ಕೆ ಸರಕಾರದಿಂದ ಮಧೂರು ಪಂಚಾಯಿತಿಗೆ ಮಂಜೂರಾದ 1.8745000 ರೂ. ಮೊತ್ತವನ್ನು ಹೊಸ ಮಾರ್ಗಸೂಚಿಯಂತೆ 56.73000 ರೂ. ಕಡಿತಗೊಳಿಸಿದ ಕ್ರಮ ಖಂಡನೀಯ ಎಂದು ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಕೂಡ್ಲು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಿಪಿಎಂ ಆಡಳಿತದಲ್ಲಿರುವ ರಾಜ್ಯ ಸರ್ಕಾರ ಮಧೂರು ಗ್ರಾಮ ಪಂಚಾಯಿತಿಯನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಇದು ನಿದರ್ಶನ. ಮಧೂರು ಗ್ರಾಮ ಪಂಚಾಯಿತಿ ರಚನೆಯಾದ ನಂತರ ಬಿಜೆಪಿ ಆಡಳಿತ ನಡೆಸುತ್ತಿದೆ. ಕಳೆದ 42 ವರ್ಷಗಳಿಂದ ಸ್ವಜನ ಪಕ್ಷಪಾತವಿಲ್ಲದೆ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿರುವ ಮಧೂರು ಪಂಚಾಯಿತಿ ಕಚೇರಿಯಲ್ಲಿ ಸಿಪಿಎಂ ಪ್ರತಿನಿಧಿಗಳು ಆಡಳಿತ ಸಮಿತಿ ಸಭೆಯಲ್ಲಿ ಕೋಲಾಹಲ ಉಂಟುಮಾಡುವ ಮೂಲಕ ಹೋರಾಟದ ನಾಟಕ ನಡೆಸಿರುವುದು ನಾಚಿಕೆಗೇಡು. ಬಿಜೆಪಿ ಆಡಳಿತದ ನಿರಂತರ ಕಲ್ಯಾಣ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಬುಡಮೇಲುಗೊಳಿಸಲು ಸಿಪಿಎಂ ಶ್ರಮಿಸಿದೆ. ಅಲ್ಲದೆ ಜನರ ಮುಂದೆ ಮಧೂರು ಗ್ರಾಮ ಪಂಚಾಯಿತಿಯ ಆಡಳಿತಕ್ಕೆ ಕಪ್ಪು ಚುಕ್ಕೆ ಬಳಿಯಲು ಯತ್ಹನಿಸುತ್ತಿದೆ ಎಂದು ತಿಳಿಸಿದರು.
ಮಧೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ಮಿಜಾ ವಿನೋದ್ ಕುಮಾರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು ಕಾಸರಗೋಡು ಮಂಡಲ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಮಜಲ್, ಪ್ರಧಾನ ಕಾರ್ಯದರ್ಶಿಗಳಾದ ಸುಕುಮಾರ್ ಕುತ್ತಿಪಾಡಿ, ಕೆ ಗುರು ಪ್ರಸಾದ್ ಪ್ರಭು, ಮಧೂರು ಪೂರ್ವ ಕ್ಷೇತ್ರಾಧ್ಯಕ್ಷ ರವೀಂದ್ರ ರೈ, ಮಧೂರು ಪಶ್ಚಿಮ ವಲಯ ಸಂಚಾಲಕ ಚಂದ್ರಹಾಸ ಮಾಸ್ತರ್ ಉಪಸ್ಥಿತರಿದ್ದರು.