ಬದಿಯಡ್ಕ: ಪೆರಡಾಲ ನವಜೀವನ ಪ್ರೌಢಶಾಲೆಯ ಮಾರ್ಚ್ 1962ರ ತಂಡದ(ಬ್ಯಾಚಿನ) ಹಳೆವಿದ್ಯಾರ್ಥಿಗಳ ಸಂಗಮ ವಿವಿಧ ಕಾರ್ಯಕ್ರಮಗಳೊಂದಿಗೆ ಕೇರಳ ಹಿರಿಯನಾಗರಿಕರ ವೇದಿಕೆ ಬದಿಯಡ್ಕ ಘಟಕದ ಸಾರಥ್ಯದಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿ ವಯೋಜನರ ಹಗಲು ಮನೆಯಲ್ಲಿ ಭಾನುವಾರ ನಡೆಯಿತು.
ಕರ್ನಾಟಕ ಸರ್ಕಾರದ ನಿವೃತ್ತ ಠಾಣಾಧಿಕಾರಿ ವಸಂತ ಮಂಗಳೂರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಮಾಜಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ನಿವೃತ್ತಿ ಜೀವನವನ್ನು ಸಂತೋಷಮಯವಾಗಿ ಕಳೆಯಬೇಕು. ಇಂತಹ ಕಾರ್ಯಕ್ರಮಗಳು ನಿರಂತರ ನಡೆದಾಗ ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಪೆರ್ಮುಖ ಈಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಪಿಲಿಂಗಲ್ಲು ಕೃಷ್ಣ ಭಟ್ ಹಾಗೂ ಡಾ.ಬೇ.ಸೀ. ಗೋಪಾಲಕೃಷ್ಣ ಭಟ್ ಕಾರ್ಯಕ್ರಮಕ್ಕೆ ಶುಭಾಸಂಶನೆಗೈದರು. ವಿಜಯಲಕ್ಷ್ಮೀ ಪುತ್ತೂರು, ಗಂಗಾದೇವಿ ಬರಿಪಗುಳಿ, ವಾಮನ ಮಾನ್ಯ, ಸಹಕಾರಿ ಧುರೀಣ ವಾಮನ ಮಂಗಳೂರು, ನಾರಾಯಣ ಶೆಟ್ಟಿ ವಿಷ್ಣುಮೂರ್ತಿನಗರ ಮಾನ್ಯ, ಎಸ್ ಎಸ್ ಭಟ್ ಸಂಪತ್ತಿಲ, ಬಳ್ಳಂಬೆಟ್ಟು ಈಶ್ವರ ಮಾಸ್ತರ್, ಓಡಂಗಲ್ಲು ಶ್ಯಾಮ್ ಭಟ್ ನ್ಯಾಯವಾದಿಗಳು, ಆದರ್ಶ ಕೃಷಿಕ ಕೋಳಾರಿ ಗೋಪಾಲ ಭಟ್, ನಿವೃತ್ತ ಪ್ರಾಧ್ಯಾಪಕ ವಸಂತಚಂದ್ರ ಏತಡ್ಕ, ಕರ್ನಾಟಕ ಸರ್ಕಾರದ ನಿವೃತ್ತ ಠಾಣಾಧಿಕಾರಿ ವಸಂತ ಮಂಗಳೂರು ತಮ್ಮ ಶಾಲಾದಿನಗಳಿಂದ ಆರಂಭಗೊಂಡು ಇಂದಿನ ತನಕದ ಜೀವನಾನುಭವಗಳನ್ನು ಹಂಚಿಕೊಂಡರು. ಕಾರ್ಯದರ್ಶಿ ಸಂಪತ್ತಿಲ ಶಂಕರನಾರಾಯಣ ಭಟ್ ಸ್ವಾಗತಿಸಿ, ವಸಂತಚಂದ್ರ ವಿಟ್ಲ ವಂದಿಸಿದರು.
ಪೆರಡಾಲ ನವಜೀವನ ಶಾಲೆಯ 1962 ಬ್ಯಾಚ್ ವಿದ್ಯಾರ್ಥಿಗಳ ಸಂಗಮ
0
October 31, 2022
Tags