ಬದಿಯಡ್ಕ: ಶ್ರೀ ಸತ್ಯಸಾಯಿ ಬಾಬಾ ಅವರ 97ನೇ ಜನ್ಮದಿನಾಚರಣೆ ಕಿಳಿಂಗಾರು ಶ್ರೀ ಸಾಯಿಮಂದಿರದಲ್ಲಿ ಬುಧವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಮಂಗಳೂರು ಲಹರಿ ತಂಡದ ರಾಜಾರಾಮ ಶೆಣೈ ಮತ್ತು ಬಳಗದವರು ಭಜನೆ ನಡೆಸಿಕೊಟ್ಟರು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ ನಡೆಯಿತು. ಇದೇ ಸಂದರ್ಭದಲ್ಲಿ ಕೊಡುಗೈದಾನಿ ಸಾಯಿರಾಂ ಕೆ.ಎನ್.ಕೃಷ್ಣ ಭಟ್ ಬಡಜನರ ಸ್ವ ಉದ್ಯೋಗಕ್ಕಾಗಿ ಕೊಡಮಾಡುವ ಹೊಲಿಗೆ ಯಂತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ವಿನೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಸಾಯಿರಾಂ ಭಟ್ ಅವರ ದಾನಧರ್ಮ ಕಾರ್ಯವನ್ನು ಅವರ ಪುತ್ರ ಮುಂದುವರಿಸಿಕೊಂಡು ಹೋಗುತ್ತಿರುವುದು ಬಡಜನರಿಗೆ ಆಶಾದಾಯಕವಾಗಿದೆ. ಇವರ ಸೇವಾಕಾರ್ಯದಿಂದ ಅದೆಷ್ಟೋ ಬಡ ಕುಟುಂಬಗಳು ಇಂದು ತಮ್ಮ ಜೀವನವನ್ನು ನಡೆಸುತ್ತಿವೆ. ಈ ಕುಟುಂಬದ ಮೂಲಕ ಇನಷ್ಟು ಸೇವಾಕಾರ್ಯಗಳು ನಡೆಯಲಿ ಎಂದರು.
ಸಾಯಿರಾಂ ಕೆ.ಎನ್.ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸಾಯಿರಾಂ ಎಂಬ ನಾಮಕ್ಕೆ ಕಷ್ಟಗಳನ್ನು ದೂರಮಾಡುವ ಶಕ್ತಿಯಿದೆ. ಹಿಂದಿನಿಂದಲೇ ಬಾಬಾ ಅವರ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಪ್ರತೀ ತಿಂಗಳ ಮೊದಲ ಭಾನುವಾರ ಕಿಳಿಂಗಾರು ಶಾಲೆಯಲ್ಲಿ ಶಾರದಾ ಮೆಡಿಕಲ್ ಕಾಲೇಜು ವತಿಯಿಂದ ಆಯುರ್ವೇದ ಚಿಕಿತ್ಸಾ ಶಿಬಿರ ನಡೆಯುತ್ತಿದೆ. ಎಲ್ಲಾ ಸೇವಾಕಾರ್ಯಗಳಿಗೂ ಊರಿನ ಜನರ ಸಹಕಾರವಿದೆ ಎನ್ನುತ್ತಾ ಸೇವಾಯೋಜನೆಗಳ ಮಾಹಿತಿಯನ್ನು ನೀಡಿದರು. 5 ಮಂದಿ ಯುವತಿಯರಿಗೆ ಹೊಲಿಗೆ ಯಂತ್ರ, ಒಬ್ಬರಿಗೆ ಡಯಾಲಿಸಿಸ್ಗೆ ಹಾಗೂ ವಿದ್ಯಾರ್ಥಿನಿಯೋರ್ವಳ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ನೀಡಲಾಯಿತು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ ಮಾನ್ಯ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್, ಸಾಯಿಭಕ್ತರು, ಸಾಯಿರಾಂ ಭಟ್ ಅವರ ಹಿತೈಷಿಗಳು, ಬಂಧುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಸತ್ಯಸಾಯಿ ಬಾಬಾರ 97ನೇ ಜನ್ಮದಿನಾಚರಣೆ; ಹೊಲಿಗೆ ಯಂತ್ರ ವಿತರಣೆ: ಬಡಕುಟುಂಬಗಳಿಗೆ ನೆರವಾದ ಸಾಯಿರಾಂ ಕೃಷ್ಣ ಭಟ್
0
November 23, 2022
Tags