ಚೆನ್ನೈ: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿಯನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ತಮಿಳುನಾಡು ಆಡಳಿತಾರೂಢ ಡಿಎಂಕೆ ಮಂಗಳವಾರ ಹೇಳಿದೆ.
ಈ ತೀರ್ಪಿಗೆ ಸಂಬಂಧಿಸಿ ಮುಂದಿನ ಕ್ರಮ ತೆಗೆದುಕೊಳ್ಳಲು ತಮಿಳುನಾಡು ಸರ್ಕಾರವು ಇದೇ 12ರಂದು ಸರ್ವಪಕ್ಷಗಳ ಸಭೆ ಕರೆದಿದೆ.
'ಇಡಬ್ಲ್ಯುಎಸ್ ಮೀಸಲಾತಿಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರೋಧಿಯಾಗಿದೆ' ಎಂದು ಸರ್ಕಾರದ ಪ್ರಕಟಣೆಯೊಂದರಲ್ಲಿ ಹೇಳಲಾಗಿದೆ.
ಸುದೀರ್ಘ ಸಾಮಾಜಿಕ ನ್ಯಾಯಕ್ಕಾಗಿ ಶತಮಾನಗಳ ಕಾಲ ದೇಶ ನಡೆಸಿದ ಹೋರಾಟಕ್ಕೆ ಇಡಬ್ಲ್ಯುಎಸ್ ಮೀಸಲಾತಿಯಿಂದ ಹಿನ್ನಡೆಯಾಗುತ್ತದೆ ಎಂದು ಈ ಹಿಂದೆ ಸ್ಟಾಲಿನ್ ಹೇಳಿದ್ದರು. ತಮಿಳುನಾಡು ಸರ್ಕಾರವು ಶೇ 10ರಷ್ಟು ಇಡಬ್ಲ್ಯುಎಸ್ ಮೀಸಲಾತಿಯನ್ನು ಜಾರಿಗೊಳಿಸಿಲ್ಲ.