ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್.ಅನಂತೇಶ್ವರ ಕ್ಷೇತ್ರದ ವಾರ್ಷಿಕ ಷಷ್ಠಿ ಮಹೋತ್ಸವ ಕಳೆದ ಗುರುವಾರ ಆರಂಭಗೊಂಡಿದ್ದು ನಿನ್ನೆ(ಮಂಗಳವಾರ) ಸಂಜೆ ಅಪೂರ್ವ ಸ್ವರ್ಣ ರಥೋತ್ಸವ ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಿಗ್ಗೆ 10 ರಿಂದ 12ರವರೆಗೆ ಧರ್ಮ, 12.30ಕ್ಕೆ ಮಹಾಪೂಜೆ, 1ಕ್ಕೆ ಯಜ್ಞ, 3.30ಕ್ಕೆ ಪೂರ್ಣಾಹುತಿ, ಸಂಜೆ 4ಕ್ಕೆ ಯಜ್ಞಾರತಿ, ಸ್ವರ್ಣ ವಾಹನದಲ್ಲಿ ಬಲಿ ಉತ್ಸವ ಮತ್ತು ರಥಾರೋಹಣಕ್ಕೆ ಹೊರಡುವುದು, ಸಂಜೆ 6.15 ಕ್ಕೆ ರಥಾರೋಹಣ ನಡೆಯಿತು. ಕಾಸರಗೋಡು ಸಹಿತ ಕಣ್ಣೂರು, ದಕ್ಷಿಣಕನ್ನಡ, ಉಡುಪಿ, ಮಡಿಕೇರಿ ಮೊದಲಾದ ದೂರದೂರುಗಳ ಸಾವಿರಾರು ಜನರು ಐತಿಹಾಸಿಕ ರಥೋತ್ಸವದ ಭಕ್ತಿಸಾಂಧ್ರತೆಯಲ್ಲಿ ಪುಳಕಿತರಾದರು. ಶ್ರೀಕ್ಷೇತ್ರದ ಆಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಬಳಿಕ ರಾತ್ರಿ 8.30ಕ್ಕೆ ರಥಾವರೋಹಣ, 9.30ಕ್ಕೆ ಮಂಗಳಾರತಿ, ಸಮಾರಾಧನೆ ನಡೆಯಿತು. ಇಂದು ಮಧ್ಯಾಹ್ನ 1.30ಕ್ಕೆ ಅವಭೃತ, 2.30 ರಿಂದ 4.30ರವರೆಗೆ ಮರದ ಲಾಲ್ಕಿ ಸಣ್ಣ ರಥೋತ್ಸವ, ಸಂಜೆ 5ಕ್ಕೆ ಶೇಷತೀರ್ಥ ಸ್ನಾನ, 6ಕ್ಕೆ ಧ್ವಜಾವರೋಹಣ, 7ಕ್ಕೆ ಗಡಿಪ್ರಸಾದ ವಿತರಣೆ, ರಾತ್ರಿ 9.30 ಕ್ಕೆ ಮಹಾಪೂಜೆ, ಸಂತರ್ಪಣೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.