ಚೆನ್ನೈ: ಮಾಂಡೌಸ್ ಚಂಡಮಾರುತಕ್ಕೆ ತಮಿಳುನಾಡಿನಾದ್ಯಂತ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಚಂಡಮಾರುತದ ಪರಿಣಾಮ ಚೆನ್ನೈ ಸೇರಿದಂತೆ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.
'ಇದುವರೆಗೆ ನಾಲ್ವರು ಮೃತಪಟ್ಟಿದ್ದಾರೆ, 98 ಜಾನುವಾರುಗಳು ಸಾವನ್ನಪ್ಪಿವೆ ಮತ್ತು 181 ನಿವಾಸಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಇತರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ' ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಶನಿವಾರ ತಿಳಿಸಿದ್ದಾರೆ.
ಮಾಂಡೌಸ್ ಚಂಡಮಾರುತವು ಶುಕ್ರವಾರ ತಡರಾತ್ರಿ ಗಂಟೆಗೆ 75 ಕಿಮೀ ವೇಗದ ಗಾಳಿಯೊಂದಿಗೆ ತಮಿಳುನಾಡು ಕರಾವಳಿಯನ್ನು ದಾಟಿದೆ.
'ನಾನು ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದೆ. ಪಾಲಿಕೆ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮಳೆಗೆ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 98 ಜಾನುವಾರುಗಳೂ ಸಾವನ್ನಪ್ಪಿವೆ. ಮನೆಗಳು ಮತ್ತು ಗುಡಿಸಲುಗಳು ಹಾನಿಗೊಳಗಾಗಿವೆ, ಇತರ ಹಾನಿಗಳ ಲೆಕ್ಕಾಚಾರ ನಡೆಯುತ್ತಿದೆ. ಚೆನ್ನೈನಲ್ಲಿ 400 ಮರಗಳು ನೆಲಕ್ಕುರುಳಿವೆ' ಎಂದು ಮುಖ್ಯಮಂತ್ರಿ ಸ್ಟಾಲಿನ್ ಚೆನ್ನೈನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಚೆನ್ನೈನ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಚಂಡಮಾರುತದಿಂದ ಉಂಟಾದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ತೀವ್ರ ಜಲಾವೃತವಾಗಿದೆ. ಇಲ್ಲಿನ ಅರುಂಬಕ್ಕಂ ಎಂಎಂಡಿಎ ಕಾಲೋನಿಯ ರಸ್ತೆಗಳು ಮುಳುಗಡೆಯಾಗಿವೆ. ಎಗ್ಮೋರ್ನಲ್ಲಿ ದೊಡ್ಡ ಮರವೊಂದು ನೆಲಕ್ಕುರುಳಿದ್ದು, ಸಮೀಪದ ಪೆಟ್ರೋಲ್ ಬಂಕ್ಗೆ ಹಾನಿಯಾಗುತ್ತಿರುವ ವಿಡಿಯೋ ಈಗ ಹೊರಬಿದ್ದಿದೆ.