ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ(4ನೇ ಮೇಳ) ಕಲಾವಿದ, ಕಾಸರಗೋಡು ಮೂಲದ ಗುರುವಪ್ಪ ಬಾಯಾರು (58) ಅವರು ಗುರುವಾರ ರಾತ್ರಿ ಕಟೀಲಿನ ಸರಸ್ವತೀ ಸದನದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ವೇಳೆ ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನ ಹೊಂದಿದರು.
ಸರಸ್ವತೀ ಸದನದಲ್ಲಿ ಕಟೀಲು ನಾಲ್ಕನೇ ಮೇಳದ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ತ್ರಿಜನ್ಮ ಮೋಕ್ಷ ಪ್ರಸಂಗದಲ್ಲಿ ಅವರು ಶಿಶುಪಾಲನ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಕೊನೆಯ ಭಾಗ ಪ್ರದರ್ಶನಗೊಳ್ಳುತ್ತಿತ್ತು. ರಂಗಸ್ಥಳದಲ್ಲಿ ನಿಂತಿದ್ದ ಗುರುವಪ್ಪ ಬಾಯಾರು ಅವರು ರಂಗಸ್ಥಳದಿಂದ ಹಠಾತ್ ಕೆಳಗಡೆ ಕುಸಿದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತರಾಗಿದ್ದರು.
ಪೈವಳಿಕೆ ಸಮೀಪದ ಬಾಯಾರು ಕರಿಯ ದೇವಾಡಿಗ-ಸರಸ್ವತೀ ದಂಪತಿಗಳ ಸುಪುತ್ರರಾಗಿದ್ದ ಗುರುವಪ್ಪ ಅವರು ಕಾವೂರು ಕೇಶವ ಅವರಿಂದ ನಾಟ್ಯ ಅಭ್ಯಾಸಗೈದು ಕಲಾಸೇವೆಗೆ ತೊಡಗಿಸಿಕೊಂಡಿದ್ದರು. ಛಂದೋಬ್ರಹ್ಮ ಶಿಮಂತೂರು ನಾರಾಯಣ ಶೆಟ್ಟಿ ಅವರಿಂದ ಯಕ್ಷಗಾನ ಪ್ರಸಂಗ ರಚನೆಗೆ ಸಂಬಂಧಿಸಿ ಚಂದೋ ಲ್ಷಣಗಳನ್ನು ಅಭ್ಯಸಿಸಿದ್ದರು. ವಜ್ರಕೋಗಿಲೆ, ಕೀರ್ತಿ ಚಂದ್ರಿಕೆ, ಗಟ್ಟದ ಗರುಡೆ, ಗಂಧರ್ವ ನರ್ತಕಿ, ಕುಡ್ಲದ ಕುರಲ್, ಕಡಲ ಕೇಸರಿ, ಚಂದ್ರಮಲ್ಲಿಗೆ ಸೂರ್ಯಕಾಂತಿ, ನಾಗಮಂಡಲ, ಅಷ್ಟಮಂಗಲ, ಸ್ವರ್ಣಮಲ್ಲಿ, ಪರಕಾಯ ಪಾರಮ್ಯ ಮೊದಲಾದ ಪ್ರಸಂಗಗಳನ್ನು ರಚಿಸಿದ್ದರು. ಕುಂಬಳೆ, ಮಂಗಳಾದೇವಿ, ಪುತ್ತೂರು ಮೇಳಗಳಲ್ಲಿ ವೇಶಧಾರಿಯಾಗಿದ್ದ ಅವರು 2013 ರಿಂದ ಶ್ರೀಕಟೀಲು ಮೇಳದಲ್ಲಿ ಕಲೋಸೇವೆಗೈಯ್ಯುತ್ತಿದ್ದರು. ಸುರತ್ಕಲ್ ಬಳಿ ವಾಸಿಸುತ್ತಿದ್ದ ಅವರು, ಮೃತರು ಪತ್ನಿ, ಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.