ಅಹಮದಾಬಾದ್: ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ವಿರುದ್ಧ ನಡೆಸುಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿರುವುದಾಗಿ ಗುಜರಾತ್ನ ವಿಶ್ವ ಹಿಂದೂ ಪರಿಷತ್ ( ವಿಎಚ್ಪಿ) ಘಟಕ ಹೇಳಿದೆ.
ಸೆನ್ಸಾರ್ ಮಂಡಳಿ ಆಕ್ಷೇಪಾರ್ಹ ಹಾಡಿನ ದೃಶ್ಯ, ಸಂಭಾಷಣೆ ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆಯಲಾಗಿದೆ ಎಂದು ವಿಎಚ್ಪಿಯ ಕಾರ್ಯದರ್ಶಿ ಅಶೋಕ್ ರಾವಲ್ ಹೇಳಿದ್ದಾರೆ.
ಪಠಾಣ್ ಸಿನಿಮಾ ವಿರುದ್ಧ ಬುಧವಾರದಿಂದ ನಿರಂತರ ಪ್ರತಿಭಟನೆಗೆ ವಿಎಚ್ಪಿ ಉದ್ದೇಶಿಸಿತ್ತು. ಆದರೆ ಸೆನ್ಸಾರ್ ಮಂಡಳಿ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಿರುವುದರಿಂದ ಬಲ ಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸುವ ಅಗತ್ಯ ಇಲ್ಲ ಎಂದು ಅಶೋಕ್ ರಾವಲ್ ಹೇಳಿದರು.
ಚಿತ್ರದಲ್ಲಿನ ಬೇಶರಮ್ ರಂಗ್ ಹಾಡು ಸೇರಿದಂತೆ, ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಲಾಗಿದೆ. ನಾವು ಪ್ರತಿಭಟನೆ ಮಾಡಿದ್ದರಿಂದ ಇದು ಸಾಧ್ಯವಾಗಿದೆ ಎಂದರು.
ಬಜರಂಗದಳ ಕೂಡ ಪ್ರತಿಭಟನೆ ಮಾಡಿತ್ತು, ಇದು ನಮ್ಮ ಎಲ್ಲ ಹಿಂದೂ ಸಂಘಟನೆಗಳ ಗೆಲುವಾಗಿದೆ ಎಂದು ಅವರು ಹೇಳಿದರು.