ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವು ಬೆಜ್ಜ ಎಂಬಲ್ಲಿ ಬಂದೂರು ತೋರಿಸಿ ಲಾರಿಚಾಲಕರಿಗೆ ಬೆದರಿಕೆಯೊಡ್ಡಿ ಲಾರಿ ಅಪಹರಿಸಲು ಯತ್ನಿಸಿದ ನಾಲ್ಕು ಮಂದಿಯ ತಮಡವನ್ನು ಪೊಲೀಸರು ಸಾಹಸಕರ ರೀತಿಯಲ್ಲಿ ಬಂಧಿಸಿದ್ದಾರೆ. ಮಹಾರಾಷ್ಟ್ರ ನಿವಾಸಿ ರಾಕೇಶ್ಕಿಶೋರ್ ಭವಿಷ್ಕರ್, ಕುಳೂರು ಚಿಗುರುಪಾದೆ ನಿವಾಸಿ ಮಹಮ್ಮದ್ ಸಫ್ವಾನ್, ಹೈದರಾಲಿ ಮತ್ತು ಉಪ್ಪಳಗೇಟ್ ನಿವಾಸಿ ಸಯಾಫ್ ಬಂಧಿತರು.
ಮೀಯಪದವು ನಿವಾಸಿ ರಹೀಂ ತಂಡದ ಮುಖಂಡನಾಗಿದ್ದು, ಈತ ಪರಾರಿಯಾಗಿದ್ದಾನೆ. ಹಪ್ತಾ ವಸೂಲಿ ನೆಪದಲ್ಲಿ ನಾಲ್ಕು ಮಂದಿಯ ತಮಡ ಬೆಜ್ಜ ಪ್ರದೇಶದಲ್ಲಿ ಎರಡು ಲಾರಿಗಳನ್ನು ತಡೆದು, ಅದರ ಚಾಲಕರನ್ನು ಹೊರಗೆಳೆದು ಎರಡೂ ಲಾರಿಗಳನ್ನು ಅಪಹರಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಮಂಜೇಶ್ವರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಅಪಹರಿಸಿ ಕೊಂಡೊಯ್ಯುತ್ತಿದ್ದ ಲಾರಿಗಳನ್ನು ತಮ್ಮ ವಾಹನದಲ್ಲಿ ಹಿಂಬಾಲಿಸಿ ಕುರುಡಪದವು ಕೊಮ್ಮಂಗಳದಲ್ಲಿ ತಡೆಯುತ್ತಿದ್ದಂತೆ ಲಾರಿ ನಿಲ್ಲಿಸಿ ಅವರ ಬೆಂಗಾವಲಾಗಿ ಆಗಮಿಸುತ್ತಿದ್ದ ಆಲ್ಟೋ ಕಾರಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಇವರನ್ನು ಸೆರೆಹಿಡಿಯಲು ಮುಂದಾಗುತ್ತಿದ್ದಂತೆ ಪೊಲೀಸರಿಗೆ ಬಂದೂಕು ತೋರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸರು ಪ್ರಾಣದ ಹಂಗು ತೊರೆದು ತಂಡದ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಮೂವರು ಪರಾರಿಯಾಗಿದ್ದಾರೆ. ಬಂಧಿತರು ಸಂಚಾರಕ್ಕೆ ಬಳಸಿದ್ದ ಕಾರು, ಒಂದು ಬಂದೂಕು, ನಾಲಕು ಮದ್ದುಗುಂಡು ವಶಪಡಿಸಿಕೊಂಡಿದ್ದಾರೆ. ಎರಡೂ ಲಾರಿಗಳನ್ನು ವಶಪಡಿಸಿ ಠಾಣೆಯಲ್ಲಿರಿಸಲಾಗಿದೆ.
ಆರೋಪಿಗಳ ವಿರುದ್ಧ ಕೊಲೆ ಯತ್ನ, ದರೋಡೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಅನಧಿಕೃತವಾಗಿ ಮಾರಕಾಯುಧ ಕೈವಶ ಮುಂತಾದ ಪ್ರಕರಣಗಳ ಬಗ್ಗೆಯೂ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕೊಲೆಯತ್ನ ಪ್ರಕರಣದ ಆರೋಪಿ:
ಲಾರಿ ದರೊಡೆ ಪ್ರಕರಣದಲ್ಲಿ ಬಂಧಿತನಾಗಿರುವ ರಾಕೇಶ್ ಕಿಶೋರ್ ಭವಿಷ್ಕರ್ ಅಂತಾರಾಷ್ಟ್ರೀಯ ಗೂಂಡಾ ತಂಡದ ಸದಸ್ಯನಾಗಿದ್ದು, ಈತನ ವಿರುದ್ಧ ಹಲವಾರು ಕೇಸು ದಾಖಲಾಗಿದೆ. ಮಂಜೇಶ್ವರ ಮತ್ತು ವಿಟ್ಲ ಠಾಣೆ ಪೊಲೀಸರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.