ನವದೆಹಲಿ: ಟರ್ಕಿಯಲ್ಲಿ ಸಂಭವಿಸಿರುವ ಪ್ರಬಲ ಭೂಕಂಪನದಿಂದ ಈಗಾಗಲೇ 4 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಟರ್ಕಿ ದೇಶದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಭಾರತದ NDRF ಹುಡುಕಾಟ ಮತ್ತು ರಕ್ಷಣಾ ತಂಡಗಳು, ವಿಶೇಷ ತರಬೇತಿ ಪಡೆದ ಶ್ವಾನಪಡೆ, ವೈದ್ಯಕೀಯ ತಂಡ, ಡ್ರಿಲ್ಲಿಂಗ್ ಯಂತ್ರಗಳು ಮತ್ತು ಇತರ ಉಪಕರಣಗಳು ಈಗಾಗಲೇ ಟರ್ಕಿಗೆ ತೆರಳಿವೆ.
ಭಾರತ ಭೂಕಂಪ ಪೀಡಿತ ಟರ್ಕಿ ದೇಶಕ್ಕೆ ಸಹಾಯಹಸ್ತ ನೀಡಿರುವುದರ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಟ್ವೀಟ್ ಮಾಡಿ, ಭಾರತದಿಂದ ಈಗಾಗಲೇ ಟರ್ಕಿಗೆ ಪರಿಹಾರ ಸಾಮಾಗ್ರಿಗಳಿರುವ ಮೊದಲ ಬ್ಯಾಚ್ನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಟರ್ಕಿ ರಾಯಭಾರಿ ಫಿರತ್ ಸುನೆಲ್ ಟ್ವೀಟ್ ಮಾಡಿ ವಿಭಿನ್ನವಾಗಿ ಇದೀಗ ಭಾರತದ ನೆರವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ, ಟರ್ಕಿ ಮತ್ತು ಹಿಂದಿಯಲ್ಲಿ ದೋಸ್ತ್ ಎಂಬುದು ಸಾಮಾನ್ಯ ಪದ ಎಂದು ಉಲ್ಲೇಖಿಸಿ, ಸಂಕಷ್ಟದಲ್ಲಿದ್ದಾಗ ಸಹಾಯಕ್ಕೆ ಬರುವವನೇ ನಿಜವಾದ ಸ್ನೇಹಿತ ಎಂದು ಬರೆದುಕೊಂಡಿದ್ದಾರೆ.
ಟರ್ಕಿಯಲ್ಲಿ ಉಂಟಾಗಿರುವ ಭೀಕರ ಭೂಕಂಪನದಿಂದ ಈಗಾಗಲೇ 4 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕಟ್ಟಡಗಳ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ ಇನ್ನಷ್ಟು ಮೃತದೇಹಗಳು ಇನ್ನಷ್ಟು ಪತ್ತೆಯಾಗಬಹುದು. ಹೀಗಾಗಿ ಒಟ್ಟು ಸಾವಿನ ಸಂಖ್ಯೆಯಲ್ಲಿ ಏರಿಕೆ ಕಾಣುವ ಸಾಧ್ಯತೆ ಹೆಚ್ಚಿದೆ.