HEALTH TIPS

ಜಮ್ಮುವಿನಲ್ಲಿ ದೊರೆತ ಲಿಥಿಯಂ ಗುಣಮಟ್ಟದ್ದು: ಉನ್ನತ ಅಧಿಕಾರಿ ಹೇಳಿಕೆ

 

                 ಜಮ್ಮು : 'ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಗ್ರಾಮದ ಬಳಿ 59 ಲಕ್ಷ ಟನ್‌ಗಳಷ್ಟು ಲಿಥಿಯಂ ನಿಕ್ಷೇಪ ಪತ್ತೆಯಾಗಿದ್ದು, ಇದು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ' ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

              ಎಲೆಕ್ಟ್ರಿಕ್‌ ವಾಹನ ಹಾಗೂ ಸೌರ ಫಲಕಗಳ ತಯಾರಿಕೆಯಲ್ಲಿ ಲಿಥಿಯಂ ಅನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಇಂತಹ ಅಮೂಲ್ಯ ಖನಿಜದ ನಿಕ್ಷೇಪವು ಭಾರತದಲ್ಲಿ ಪತ್ತೆಯಾಗಿರುವುದು ಇದೇ ಮೊದಲು.

               'ಲಿಥಿಯಂ ಅತ್ಯಂತ ನಿರ್ಣಾಯಕ ಖನಿಜ ಸಂಪನ್ಮೂಲ. ಈವರೆಗೆ ದೇಶದ ಯಾವ ಭಾಗದಲ್ಲೂ ಇದು ಪತ್ತೆಯಾಗಿರಲಿಲ್ಲ. ಲಿಥಿಯಂಗಾಗಿ ನಾವು ಇತರ ದೇಶಗಳನ್ನು ಅವಲಂಬಿಸಬೇಕಾಗಿತ್ತು. ಈ ಖನಿಜವನ್ನು ಶೇ 100ರಷ್ಟು ಆಮದು ಮಾಡಿಕೊಳ್ಳುತ್ತಿದ್ದೆವು. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು (ಜಿಎಸ್‌ಐ) ಉನ್ನತ ಮಟ್ಟದ ಅಧ್ಯಯನ (ಜಿ-3) ಕೈಗೊಂಡಿತ್ತು. ಈ ವೇಳೆ ಸಲಾಲ್‌ ಗ್ರಾಮದಲ್ಲಿರುವ ಮಾತಾ ವೈಷ್ಣೊದೇವಿ ದೇಗುಲದ ತಪ್ಪಲಿನಲ್ಲಿ ನಿಕ್ಷೇಪ ಪತ್ತೆಯಾಗಿದೆ' ಎಂದು ಜಮ್ಮು ಮತ್ತು ಕಾಶ್ಮೀರದ ಗಣಿ ಇಲಾಖೆಯ ಕಾರ್ಯದರ್ಶಿ ಅಮಿತ್‌ ಶರ್ಮಾ ಹೇಳಿದ್ದಾರೆ.

                 'ಜಮ್ಮುವಿನಲ್ಲಿ ದೊರೆತಿರುವ ಲಿಥಿಯಂ ಖನಿಜವು 550 ಪಾರ್ಟ್ಸ್ ಪರ್‌ ಮಿಲಿಯನ್‌ (ಪಿಪಿಎಂ) ಗ್ರೇಡ್‌ ಹೊಂದಿದೆ. ಈ ಖನಿಜದ ಲಭ್ಯತೆ ವಿಚಾರದಲ್ಲಿ ಭಾರತವು ಈಗ ಚೀನಾವನ್ನೇ ಹಿಂದಿಕ್ಕಿದೆ. ಈ ನಿಕ್ಷೇಪ ಪತ್ತೆಯಾಗಿರುವ ಆಯ್ದ ಕೆಲ ರಾಷ್ಟ್ರಗಳ ಪಟ್ಟಿಯಲ್ಲಿ ಈಗ ಭಾರತವೂ ಸ್ಥಾನ ಗಳಿಸಿದೆ' ಎಂದು ಮಾಹಿತಿ ನೀಡಿದ್ದಾರೆ.

                ಖನಿಜ ಹೊರತೆಗೆಯುವ ಕಾರ್ಯ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆಗೆ, 'ನಾವು ಜಿ-3 ಹಂತದ ಅಧ್ಯಯನ ಕೈಗೊಂಡಿದ್ದೆವು. ಮುಂದಿನ ದಿನಗಳಲ್ಲಿ ಜಿ-2 ಮತ್ತು ಜಿ-1 ಅಧ್ಯಯನ ಕೈಗೊಳ್ಳಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ನಂತರವೇ ಖನಿಜ ಹೊರತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ' ಎಂದಿದ್ದಾರೆ.

                 'ಈ ನಿಕ್ಷೇಪವು ಸ್ಥಳೀಯರ ಬದುಕನ್ನು ಹಸನಾಗಿಸಲಿದೆ. ಈ ಯೋಜನೆಯಲ್ಲಿ ಸ್ಥಳೀಯ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಯೋಜನೆಗಾಗಿ ಭೂಮಿ ಹಾಗೂ ಮನೆ ಕಳೆದುಕೊಳ್ಳುವವರಿಗೆ ನಿಯಮದ ಅನುಸಾರವಾಗಿ ಪರಿಹಾರ ಒದಗಿಸಲಾಗುತ್ತದೆ. ಅವರಿಗೆ ಪುನರ್ವಸತಿ ಕಲ್ಪಿಸಲಾಗುತ್ತದೆ' ಎಂದೂ ತಿಳಿಸಿದ್ದಾರೆ.

ಸ್ಥಳೀಯರಲ್ಲಿ ಹರ್ಷ

            ಲಿಥಿಯಂ ನಿಕ್ಷೇಪ ಪತ್ತೆಯು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ. ತಮ್ಮ ಬದುಕು ಹಸನಾಗಬಹುದೆಂಬ ಆಶಾ ಭಾವನೆಯೂ ಅವರಲ್ಲಿ ಚಿಗುರೊಡೆಯುವಂತೆ ಮಾಡಿದೆ.

              'ನಮ್ಮ ಪಾಲಿಗೆ ಇದು ಅತ್ಯಂತ ಸಂತಸದ ವಿಚಾರ. ಜೊತೆಗೆ ಹೆಮ್ಮೆ ಪಡುವಂತಹದ್ದು. ಈ ಯೋಜನೆಯು ನಮ್ಮ ಬದುಕಿನ ದಿಕ್ಕನ್ನೇ ಬದಲಿಸಬಹುದೆಂಬ ನಿರೀಕ್ಷೆ ಇದೆ' ಎಂದು ಸಲಾಲ್‌ನ ಉಪ ಸರ್‌ಪಂಚ್‌ ರಾಜೀಂದರ್‌ ಸಿಂಗ್‌ ಹೇಳಿದ್ದಾರೆ.

                'ಗುಡ್ಡಗಾಡು ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಅಧ್ಯಯನ ನಡೆಸಿದ್ದೆವು. ಸರ್ವೇ ಕಾರ್ಯದ ಅವಧಿಯಲ್ಲಿ ನಮ್ಮ ತಂಡದ ಸದಸ್ಯರೊಬ್ಬರು ಮೃತಪಟ್ಟಿದ್ದರು. ಈ ಯೋಜನೆಯ ಭಾಗವಾಗಿರುವುದಕ್ಕೆ ಖುಷಿಯಾಗುತ್ತಿದೆ. ಈ ಯೋಜನೆಯಿಂದ ಸ್ಥಳೀಯರಿಗೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಲಭಿಸಲಿದೆ' ಎಂದು ಸ್ಥಳೀಯ ನಿವಾಸಿ ಹಾಗೂ ಜಿಎಸ್‌ಐ ಸರ್ವೇ ತಂಡದ ನೌಕರ ಜಸ್ಪಾಲ್‌ ಸಿಂಗ್‌ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries