ಗುವಾಹಟಿ: ಕೇಂದ್ರ ಸರ್ಕಾರ ಹಾಗೂ ನಾಗಾಲ್ಯಾಂಡ್ನ ಬಂಡುಕೋರರ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಈಶಾನ್ಯ ರಾಜ್ಯದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ಈ ಕ್ರಮವು ಫಲ ನೀಡುವ ವಿಶ್ವಾಸವಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಾಗಾಲ್ಯಾಂಡ್ನ ಟ್ಯೂನ್ಸಂಗ್ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಹಕ್ಕುಗಳ ಕುರಿತಾದ ಕೆಲ ವಿವಾದಗಳಿವೆ. ವಿಧಾನಸಭೆ ಚುನಾವಣೆ ಬಳಿಕ ಅವುಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು.
ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರರ ಹಾವಳಿ ತಗ್ಗುತ್ತಿದೆ ಎಂಬುದನ್ನು ಒತ್ತಿ ಹೇಳಿದ ಅಮಿತ್ ಶಾ, ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಹಿಂಸಾಚಾರ ಶೇಕಡ 70ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.
ಹಿಂಸಾಚಾರದಿಂದ ಆಗುತ್ತಿದ್ದ ಭದ್ರತಾ ಪಡೆ ಸಿಬ್ಬಂದಿಯ ಸಾವಿನ ಪ್ರಮಾಣವೂ ಶೇಕಡ 60ರಷ್ಟು, ನಾಗರಿಕರ ಸಾವಿನ ಪ್ರಮಾಣ ಶೇಕಡ 83ರಷ್ಟು ತಗ್ಗಿದೆ ಎಂದು ತಿಳಿಸಿದರು.
ಈಗಾಗಲೇ ನಾಗಾಲ್ಯಾಂಡ್ನ ಹಲವು ಕಡೆಗಳಿಂದ ಸಶಸ್ತ್ರ ಪಡೆಗೆ ವಿಶೇಷ ಅಧಿಕಾರ ಕಾಯ್ದೆಯನ್ನು(ಎಎಫ್ಎಸ್ಪಿಎ) ತೆಗೆದುಹಾಕಲಾಗಿದೆ. ಮುಂದಿನ 3-4 ವರ್ಷಗಳಲ್ಲಿ ರಾಜ್ಯದಾದ್ಯಂತ ಈ ಕಾಯ್ದೆಯನ್ನು ತೆಗೆದುಹಾಕುವ ವಿಶ್ವಾಸವಿದೆ ಎಂದು ಹೇಳಿದರು.
60 ಕ್ಷೇತ್ರಗಳ ನಾಗಾಲ್ಯಾಂಡ್ ವಿಧಾನಸಭೆಗೆ ಫೆಬ್ರುವರಿ 27ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 2ರಂದು ಮತ ಎಣಿಕೆ ನಡೆಯಲಿದೆ.