ಕಾಸರಗೋಡು: ಕರಾವಳಿ ಭಾಗದ ಇತಿಹಾಸದಲ್ಲಿ ಎಡರಂಗ ಸರ್ಕಾರ ಅತಿ ದೊಡ್ಡ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಮಡು ಬಂದಿರುವುದಾಗಿ ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ವ್ಯವಹಾರಗಳ ಸಚಿವ ಸಜಿ ಚೆರಿಯನ್ ತಿಳಿಸಿದ್ದಾರೆ.
ಅವರು ಅಡ್ಕತ್ತಬೈಲ್ ಕಸಬಾ ಕಡಪ್ಪುರ ಜಿಎಫ್ಯುಪಿ ಶಾಲೆಗೆ ರಾಜ್ಯ ಮೀನುಗಾರಿಕೆ ಇಲಾಖೆ ವತಿಯಿಂದ ನಿರ್ಮಿಸಲಾದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ಕರಾವಳಿ ಭಾಗದಲ್ಲಿ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರಕಾರಕ್ಕೆ ಸಾಧ್ಯವಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಕೇರಳದಲ್ಲಿ ಒಳನಾಡು ಮೀನುಗಾರಿಕೆ ಜಾರಿಗೊಳಿಸಲಾಗುವುದು. ಇದಕ್ಕಾಗಿ ಮೀನುಗಾರರಿಗೆ ಉಚಿತವಾಗಿ ದೋಣಿಗಳನ್ನು ನೀಡಲಾಗುವುದು. ಮೀನುಗಾರರ ಕುಟುಂಬಗಳಿಗೆ ಮೀನುಗಾರಿಕೆಯ ಹೊರತಾಗಿ ಮತ್ತೊಂದು ಆದಾಯದ ಮೂಲವನ್ನು ಕಂಡುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉನ್ನಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ನಗರಸಭಾ ಸದಸ್ಯರಾದ ರಜಿನಿ ಪ್ರಭಾಕರನ್, ಆರ್.ರೀತಾ, ಎಂ.ಉಮಾ, ಅಜಿತ್ ಕುಮಾರ್, ಪಿ.ರಮೇಶ್, ಕಾಸರಗೋಡು ಮೀನುಗಾರಿಕಾ ಉಪನಿರ್ದೇಶಕ ಪಿ.ವಿ.ಸತೀಶನ್, ಡಿಡಿಇ ಸಿ.ಕೆ.ವಾಸು, ಡಿಇಒ ಎನ್.ನಂದಿಕೇಶನ್, ಕಾಸರಗೋಡು ಎಇಒ ಆಗಸ್ಟಿನ್ ಬರ್ನಾರ್ಡ್ ಉಪಸ್ಥಿತರಿದ್ದರು.
ಎಡರಂಗ ಸರ್ಕಾರದಿಂದ ಕರಾವಳಿ ಪ್ರದೇಶದಲ್ಲಿ ಮಹತ್ವದ ಅಭಿವೃದ್ಧಿ-ಶಾಲಾ ಕಟ್ಟಡ ಉದ್ಘಾಟಿಸಿ ಸಚಿವ ಸಜಿ ಚೆರಿಯನ್
0
April 03, 2023
Tags