ಕಾಸರಗೋಡು: ಕೇಂದ್ರ ಸರ್ಕಾರ ಪೂರೈಸಿರುವ ಆಹಾರಧಾನ್ಯಗಳನ್ನು ಪಿಣರಾಯಿ ವಿಜಯನ್ ತನ್ನ ಲೇಬಲ್ನ ಚೀಲದಲ್ಲಿ ಹಾಕಿ ಜನತೆಗೆ ನೀಡಿರುವುದಕ್ಕೆ ಪ್ರತಿಯಾಗಿ ಸಿಪಿಎಂಗೆ ಮತನೀಡಿ ಗೆಲ್ಲಿಸಿದ ರಾಜ್ಯದ ಜನತೆಗೆ ಇಂದು ವಂಚನೆಯ ಅರಿವಾಗಿರುವುದಾಗಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ತಿಳಿಸಿದ್ದಾರೆ.
ಅವರು ಅವರು ತ್ರಿಶೂರ್ನಲ್ಲಿ ನಡೆಯಲಿರುವ ಮಹಿಳಾ ಸಬಲೀಕರಣ ಸಮಾವೇಶದಲ್ಲಿ ಭಾಗವಹಿಸಲು ಜಿಲ್ಲೆಯಿಂದ ತೆರಳಲಿರುವ ಮಹಿಳೆಯರ ಜಿಲ್ಲಾ ಮಟ್ಟದ ನೋಂದಾವಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗದ ಪರಿಸ್ಥಿತಿಯಿದೆ. ಸಾಲದ ವಿಷಯದಲ್ಲಿ ಕೇರಳ ಅತ್ಯಂತ ಅಪಾಯಕಾರಿ ಘಟ್ಟವನ್ನು ಎದುರಿಸುತ್ತಿದೆ. ವಿದ್ಯಾರ್ಥಿಗಳು ಮತ್ತು ಯುವಕರು ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕೇರಳವನ್ನು ತೊರೆಯಬೇಕಾದ ಸನ್ನಿವೇಶವಿದೆ. ಸಂಸದ ಸ್ಥಾನ ಕೈತಪ್ಪಿದರೂ ಸರ್ಕಾರಿ ಬಂಗಲೆ ತೆರವುಗೊಳಿಸಲು ರಾಹುಲ್ಗಾಂಧಿ ಕುಟುಂಬ ತಯಾರಾಗದಿರುವುದು ವಿಪರ್ಯಾಸ. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ ನಂತರ ಭಾರತವು ಪ್ರಪಂಚದ ಮುಂದೆ ಸೂಪರ್ ಸ್ಥಾನಮಾನವನ್ನು ಸಾಧಿಸುವಂತಾಗಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿಶತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾಣ ಕಾರ್ಯದರ್ಶಿಗಳಾದ ಎ.ವೇಲಾಯುಧನ್, ವಿಜಯಕುಮಾರ ರೈ, ಕೋಶಾಧಿಕಾರಿ ಮಹಾಬಲ ರೈ, ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಎಂ.ಎಲ್.ಅಶ್ವಿನಿ, ಜಿಲ್ಲಾಧ್ಯಕ್ಷೆ ಪುಷ್ಪಗೋಪಾಲಾನ್, ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷೆ ಪ್ರಮಿಳಾ ಮಜಲ್, ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ, ಚಂದ್ರಹಾಸ ಮಾಸ್ಟರ್ ಉಪಸ್ಥಿತರಿದ್ದರು.
ಸಿಪಿಎಂಗೆ ಮತಹಾಕಿ ವಂಚನೆಗೊಳಗಾದ ಕೇರಳದ ಜನತೆ: ಎ.ಪಿ ಅಬ್ದುಲ್ಲಕುಟ್ಟಿ
0
April 01, 2023