ನವದೆಹಲಿ:ಬ್ಯಾಂಕ್ ಅಧಿಕಾರಿಗಳ ಶಾಮೀಲಾತಿಯೊಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್(Kisan Credit Card) ವ್ಯವಸ್ಥೆಯಲ್ಲಿ ನಡೆದಿರುವ ವಂಚನೆಗಳ ಕುರಿತು ದೇಶವ್ಯಾಪಿ ವಿಚಾರಣೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯವು, ಅರ್ಜಿದಾರರು ಹೊರಿಸಿರುವ ಸಾರ್ವತ್ರಿಕ ಆರೋಪಗಳ ಆಧಾರದಲ್ಲಿ ಇಂತಹ ತನಿಖೆಯು ಸಾಧ್ಯವಿಲ್ಲ ಎಂದು ಹೇಳಿದೆ.
ಆದರೂ, ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್(S.K Kaul) ಮತ್ತು ಅರವಿಂದ ಕುಮಾರ(Aravind Kumar) ಅವರ ಪೀಠವು, ಅರ್ಜಿದಾರರಾದ ವಕೀಲ ಚಂದ್ರಶೇಖರ ಮಣಿ(Chandrasekhara Mani) ಅವರಿಗೆ ತನ್ನ ದೂರುಗಳೊಂದಿಗೆ ಆರ್ ಬಿಐ ಅನ್ನು ಸಂಪರ್ಕಿಸಲು ಸ್ವಾತಂತ್ರವನ್ನು ನೀಡಿತು.
ಅರ್ಜಿದಾರರು ಮಾಡಿರುವ ಸಾರ್ವತ್ರಿಕ ಆರೋಪಗಳ ಕುರಿತು ವಿಚಾರಣೆ ನಡೆಸಲು ಸಂವಿಧಾನದ ವಿಧಿ 32ರಡಿ ಸಾಧ್ಯವಿಲ್ಲ. ಸ್ವತಃ ವಕೀಲರಾಗಿರುವ ಅರ್ಜಿದಾರರಿಗೆ ಕಾನೂನಿನ ಬಗ್ಗೆ ಚೆನ್ನಾಗಿ ತಿಳಿದಿರುವುದರಿಂದ ಈ ವಿಷಯವನ್ನು ಮುಂದುವರಿಸುವ ಮುನ್ನ ಅವರು ಚೆನ್ನಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದ ಪೀಠವು,ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯಲ್ಲಿ ಹಣಕಾಸು ವಂಚನೆಗಳು ನಡೆದಿವೆ ಎಂಬ ತನ್ನ ಆರೋಪಗಳ ವಿವರಗಳನ್ನು ನೀಡುವ ಮೂಲಕ ಅವರು ಸಂಬಂಧಿತ ಸಚಿವಾಲಯಕ್ಕೆ ಅಹವಾಲು ಸಲ್ಲಿಸಲು ಸ್ವತಂತ್ರರಾಗಿದ್ದಾರೆ ಎಂದು ಹೇಳಿತು.
ಎರಡು ವಂಚನೆ ಪ್ರಕರಣಗಳನ್ನು ಹೊರತುಪಡಿಸಿ ಇತರವು ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯ ಕಾರ್ಯವಿಧಾನದ ಕುರಿತು ಸಾರ್ವತ್ರಿಕ ಆರೋಪಗಳಾಗಿವೆ ಮತ್ತು ಇಂತಹ ಅರ್ಜಿಯನ್ನು ಅರ್ಜಿದಾರರು ಆರ್ಬಿಐಗೆ ಸಲ್ಲಿಸಬೇಕು ಎಂಬ ಪ್ರಕರಣದಲ್ಲಿ ಅಮಿಕಸ್ ಕ್ಯುರೆ ಆಗಿರುವ ಹಿರಿಯ ನ್ಯಾಯವಾದಿ ಜಯಂತ ಮೆಹ್ತಾ ಅವರ ಹೇಳಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯಲ್ಲಿ ಹಣಕಾಸು ವಂಚನೆಗಳು ನಡೆದಿರುವುದರಿಂದ ರೈತರ ಹಕ್ಕುಗಳನ್ನು ರಕ್ಷಿಸುವಲ್ಲಿ ಕೇಂದ್ರವು ವಿಫಲವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.