ನವದೆಹಲಿ : ಬಿಜೆಪಿಯೂ ಭಾರತವನ್ನು ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಮುಕ್ತಗೊಳಿಸಲು ಮತ್ತು ಕಾನೂನು ಹಾಗೂ ಸುವ್ಯವಸ್ಥೆಯ ಸವಾಲುಗಳನ್ನು ಎದುರಿಸಲು ಬೇಕಾದ ಕಠಿಣ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಜೆಪಿಯ 44ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಹನುಮಾನ್ ಜಯಂತಿಯನ್ನು ಪ್ರಸ್ತಾಪಿಸಿ 'ಆಂಜನೇಯನಂತೆ ಪಕ್ಷವು ನಿಸ್ವಾರ್ಥ ಸೇವೆಯಲ್ಲಿ ನಂಬಿಕೆ ಹೊಂದಿದೆ' ಎಂದರು.
'ಸಾಧಿಸುವ ಛಲ ಇದ್ದಲ್ಲಿ ಯಶಸ್ಸು ಲಭಿಸುತ್ತದೆ ಎಂಬುದು ಹನುಮಾನ್ ದೇವರ ಜೀವನವನ್ನು ಗಮನಿಸಿದಾಗ ಗೊತ್ತಾಗುತ್ತದೆ. ದೈತ್ಯಶಕ್ತಿಗಳನ್ನು ಹನುಮಾನ್ ಮಟ್ಟಹಾಕಿದಂತೆ, ನಮ್ಮ ಸರ್ಕಾರ ಕೂಡ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಂತಹ ಅನಿಷ್ಟಗಳ ನಿರ್ಮೂಲನೆಗೆ ಶ್ರಮಿಸುವುದು' ಎಂದು ಹೇಳಿದರು.
ಉಚಿತ ಪಡಿತರ ವಿತರಣೆ, ಜೀವ ವಿಮೆ ಮತ್ತು ಇತರ ಕಲ್ಯಾಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬಿಜೆಪಿಯು ಸಾಮಾಜಿಕ ನ್ಯಾಯವನ್ನು ಒದಗಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.
ವಿರೋಧ ಪಕ್ಷಗಳು ದೊಡ್ಡ ಕನಸುಗಳನ್ನು ಕಾಣದೆ ಚಿಕ್ಕ ಕನಸುಗಳನ್ನು ಕಂಡು ಚಿಕ್ಕ ಸಾಧನೆಗಳಿಗೆ ತೃಪ್ತಿ ಪಟ್ಟುಕೊಳ್ಳುತ್ತವೆ. 'ಬಿಜೆಪಿಯೂ ದೊಡ್ಡ ಕನಸುಗಳಲ್ಲಿ ನಂಬಿಕೆ ಹೊಂದಿದ್ದು, ದೊಡ್ಡ ಗುರಿಗಳನ್ನು ಸಾಧಿಸುವುದು' ಎಂದು ಅವರು ಹೇಳಿದರು.
'2014ರಲ್ಲಿ ಪಕ್ಷವು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಸಾಮ್ರಾಜ್ಯಶಾಹಿ ಮನಸ್ಠಿತಿಯ ಕೆಲವರಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿ ಅವರು ಈ ದೇಶದ ಬಡವರು ಹಾಗೂ ಹಿಂದುಳಿದವರನ್ನು ಅವಮಾನಿಸುತ್ತಲೇ ಇದ್ದಾರೆ' ಎಂದು ವಾಗ್ದಾಳಿ ನಡೆಸಿದರು.
ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆಯುವ ಐತಿಹಾಸಿಕ ದಿನ ಬರುತ್ತದೆ ಎಂದು ವಿರೋಧ ಪಕ್ಷಗಳು ಊಹಿಸಿಯೂ ಇರಲಿಲ್ಲ. ಅದು ಈಡೇರಿದಾಗ ಬಿಜೆಪಿ ಮಾಡಿರುವ ಕೆಲಸವನ್ನು ಜೀರ್ಣಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಮೋದಿ ಹೇಳಿದರು.
ವಿರೋಧ ಪಕ್ಷದವರು ಎಷ್ಟು ಹತಾಶರಾಗಿದ್ದಾರೆ ಎಂದರೆ 'ಮೋದಿಯವರೇ ನಿಮ್ಮ ಸಮಾಧಿ ತೋಡಲಾಗುತ್ತದೆ' ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದರು.