ನವದೆಹಲಿ: ಕಾಂಗ್ರೆಸ್ ಕೊನೆಗೂ ನ್ಯಾಯಾಂಗದ ಮೇಲೆ ನಂಬಿಕೆ ತೋರಿದೆ. ಇದರೊಂದಿಗೆ ಪಕ್ಷವು ಹಿಂದುಳಿದ ವರ್ಗಗಳಿಗೆ 'ಅವಮಾನ' ಮಾಡಿದ್ದಕ್ಕಾಗಿ ಈಗ ಕ್ಷಮೆ ಯಾಚಿಸಲೇಬೇಕು ಎಂದು ಬಿಜೆಪಿ ಭಾನುವಾರ ಹೇಳಿದೆ.
ಮಾನನಷ್ಟ ಮೊಕದ್ದಮೆಯಲ್ಲಿ ತಮಗೆ ಜೈಲು ಶಿಕ್ಷೆ ವಿಧಿಸಿದ ಸೂರತ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂಬ ವರದಿ ಬೆನ್ನಲ್ಲೇ ಈ ಹೇಳಿಕೆ ನೀಡಿದೆ.
'ಇದು ಸ್ವಾಗತಾರ್ಹ ಹೆಜ್ಜೆ. ತಡವಾಗಿಯಾದರೂ ಕಾಂಗ್ರೆಸ್ ನ್ಯಾಯಾಂಗದ ಮೇಲೆ ನಂಬಿಕೆ ಇರಿಸಿದೆ' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನಾವಾಲ ಸುದ್ದಿಗಾರರಿಗೆ ತಿಳಿಸಿದರು.
'ಬೇರೆ ಪ್ರಕರಣಗಳಲ್ಲಿ ಕೆಲವೇ ಗಂಟೆಗಳಲ್ಲಿ ಮೇಲ್ಮನವಿ ಸಲ್ಲಿಸುತ್ತಿದ್ದ ಕಾಂಗ್ರೆಸ್, ತಮ್ಮ ನಾಯಕನ ವಿರುದ್ಧದ ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಇಷ್ಟು ದಿನ ತೆಗೆದುಕೊಂಡಿದ್ದೇಕೆ ಎಂಬುದು ವಿಮರ್ಶೆಗೆ ಅರ್ಹ' ಎಂದು ಹೇಳಿದರು.