ಕಾಸರಗೋಡು: ತ್ಯಾಜ್ಯ ನಿರ್ವಹಣೆ ಬಗ್ಗೆ ಸಮುದಾಯ ಜಾಗೃತಿಯು ಶಾಲೆಗಳಿಂದ ಆರಂಭಗೊಳ್ಳಬೇಕು ಎಂಬುದಾಗಿ ಕೇರಳ ವಿಧಾನಸಭೆಯ ಸ್ಪೀಕರ್ ಎ.ಎನ್ ಶಂಸೀರ್ ಅಭಿಪ್ರಾಯಪಟ್ಟರು.
ಅವರು ಸರ್ಕಾರ 2020-21ರ ವಾರ್ಷಿಕ ಯೋಜನೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕಕ್ಕಾಟ್ ಸರ್ಕಾರಿ ಹೈರ್ ಸೆಕೆಂಡರಿ ಶಾಲೆಗಾಗಿ ನಿರ್ಮಿಸಿದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಪೂರ್ವ ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಾಮಾನ್ಯ ಅರಿವು ಮೂಡಿಸಲು ಶಿಕ್ಷಕರು ಪ್ರಯತ್ನಿಸಬೇಕು. ಅನೇಕ ಜನರು ವೈಯಕ್ತಿಕ ನೈರ್ಮಲ್ಯವನ್ನು ಮರೆತುಬಿಡುತ್ತಾರೆ. ಮಕ್ಕಳಿಗೂ ಈ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು. ಕಳೆದ ಏಳು ವರ್ಷಗಳಿಂದ ಕೇರಳದ ಸಾರ್ವಜನಿಕ ಶಿಕ್ಷಣ ವಲಯದಲ್ಲಿ ಮಹತ್ವದ ಅಭಿವೃದ್ಧಿ ದಾಖಲಾಗಿದೆ ಎಂದು ತಿಳಿಸಿದರು.
ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉನ್ಣಿಥಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಎಂ.ಯಮುನಾ ವರದಿ ಮಂಡಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಶಾಲಾ ಪ್ರವೇಶ ದ್ವಾರವನ್ನು ಉದ್ಘಾಟಿಸಿದರು. ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ, ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ವಿ.ಪ್ರಕಾಶ್ ಸ್ವಾಗತಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ವಿ.ಮಧು ವಂದಿಸಿದರು.
ತ್ಯಾಜ್ಯ ನಿರ್ವಹಣೆ ಬಗೆಗಿನ ಅರಿವು ಪೂರ್ವಪ್ರಾಥಮಿಕ ಹಂತದಿಂದ ಮೂಡಿಬರಬೇಕು: ಶಾಲಾ ಕಟ್ಟಡ ಉದ್ಘಾಟಿಸಿ ಸ್ಪೀಕರ್ ಎ.ಎನ್ ಶಂಸೀರ್ ಅಬಿಪ್ರಾಯ
0
April 01, 2023