ಪುತ್ತಿಗೆ ಸಮೀಪದ ಮುಗು ಶ್ರೀಸುಬ್ರಾಯ ದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಂಗವಾಗಿ ಗರ್ಭ ಗುಡಿ ಹಾಗೂ ತೀರ್ಥ ಮಂಟಪದ ಮರದ ಕೆಲಸ ಆರಂಭವನ್ನು ವಿಶೇಷ ಸೀಯಾಳಭಿಷೇಕ ಬಲಿವಾಡು ಕೂಟ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದೊಂದಿಗೆ ನಡೆಸಲಾಯಿತು. ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೊಡುಗೈ ದಾನಿ,ಮುಂಬಯಿಯ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಾ "ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರಗಳು ಶೀಘ್ರವಾಗಿ ನಡೆಯಬೇಕಿದ್ದು ಇದಕ್ಕೆ ಕೈಲಾದ ಸಹಾಯ ನೀಡುವುದು ಭಗವತ್ ಪ್ರೀತಿಗೆ ಸಮಾನ. ದೇವರು ನಮಿಗೆ ಎಷ್ಟು ನೀಡಿದ್ದಾನೆ ಎಂದು ಲೆಕ್ಕ ಮಾಡಿ ಕೊಡುವುದಕ್ಕಿಂತ ದೇವರು ಕೊಡುವ ಸಂಪತ್ತನ್ನು ಭಗವಂತನಿಗೆ ಲೆಕ್ಕವಿಲ್ಲದೆ ಅರ್ಪಿಸುವುದೇ ನಿಜವಾದ ದಾನ ಧರ್ಮ" ಎಂದರು. ಉದ್ಯಮಿ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು.
ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನಗೈದರು. ಯುಎಇ ಎಕ್ಸ್ ಚೆಂಜ್ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಡಾ.ನಾರಾಯಣ ನಾಯ್ಕ್ ಏಳ್ಕಾನ, ಕರೋಡಿ ಉದಯ ಶಂಕರ ಭಟ್,ಅನಿಲ್ ಕಲೆಗಾರ, ಎಂ.ಪಿ.ಬಾಲಕೃಷ್ಣ ಶೆಟ್ಟಿ ಕಿನ್ನಿಮಜಲು,ಕೃಷ್ಣ ಎ,ಬಾಲಕೃಷ್ಣ ಭಂಡಾರಿ ಪುತ್ತಿಗೆಬೈಲು ಮೊದಲಾದವರು ಪಾಲ್ಗೊಂಡು ಶುಭ ಹಾರೈಸಿದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೆಂಕಟ್ರಮಣ ಭಟ್ ಪಳ್ಳ ಸ್ವಾಗತಿಸಿ ವೇಣುಗೋಪಾಲ್ ಶೆಟ್ಟಿ ವಂದಿಸಿದರು.ರಾಮ್ ಕುಮಾರ್ ನಿರೂಪಿಸಿದರು.ಈ ಸಂದರ್ಭದಲ್ಲಿ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಶ್ರೀದೇವರಿಗೆ ಸೀಯಾಳ ಅಭಿಷೇಕ ಹಾಗೂ ಬಲಿವಾಡು ಕೂಟ ಹಾಗೂ ಪುತ್ತಿಗೆ ವಿಷ್ಣು ಆಚಾರ್ಯರ ಕಾರ್ಮಿಕತ್ವದಲ್ಲಿ ನೂತನ ಗರ್ಭಗುಡಿಯ ಮಾಡಿನ ಮರದ ಕೆಲಸ ಪ್ರಾರಂಭಿಸಲಾಯಿತು.