HEALTH TIPS

ಯುಸಿಸಿ: ಕೇಂದ್ರ ಸರ್ಕಾರದ ಉದ್ದೇಶ ಪ್ರಶ್ನಿಸಿದ ಪ್ರತಿಪಕ್ಷಗಳು

               ವದೆಹಲಿ: ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಪ್ರಕ್ರಿಯೆಯನ್ನು ಮುಂದುವರಿಸಲು ಕಾನೂನು ಆಯೋಗದ ವರದಿಗಾಗಿ ಕಾನೂನು ಮತ್ತು ನ್ಯಾಯ ಸಚಿವಾಲಯ ಕಾಯುತ್ತಿದ್ದರೆ, ಸೋಮವಾರ ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ವಿರೋಧ ಪಕ್ಷಗಳು ಈ ಕುರಿತ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿವೆ.

               ಅಲ್ಲದೆ, ಕಾನೂನು ಆಯೋಗವು ಈ ಕುರಿತು ಪುನಃ ಕಸರತ್ತು ಆರಂಭಿಸಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

               ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ಅವರು ತನ್ನ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ಸಮಿತಿ ಸಭೆಯಲ್ಲಿ, '371ನೇ ವಿಧಿ ಪ್ರಕಾರ ವಿಶೇಷ ಸ್ಥಾನಮಾನ ಹೊಂದಿರುವ ಈಶಾನ್ಯ ರಾಜ್ಯಗಳು ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯಿಂದ ವಿನಾಯಿತಿ ಪಡೆಯಬಹುದೇ' ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

                  'ವಿರೋಧ ಪಕ್ಷಗಳು ಸಭೆಯಲ್ಲಿ ಯಸಿಸಿ ಕುರಿತು ಬಹಿರಂಗವಾಗಿ ವಿರೋಧಿಸಿಲ್ಲ. ಅವರು ಯುಸಿಸಿ ಕರಡು  ಪ್ರತಿಗಾಗಿ ಕಾಯುತ್ತಿದ್ದಾರೆ ಎಂದು ಸುಶೀಲ್‌ ಕುಮಾರ್‌ ಮೋದಿ ತಿಳಿಸಿದ್ದಾರೆ.

ಚುನಾವಣಾ ಉದ್ದೇಶ-ಆರೋಪ: 'ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಯುಸಿಸಿ ವಿಚಾರವನ್ನು ಮುಂಚೂಣಿಗೆ ತಂದಿದೆ' ಎಂದು ಕಾಂಗ್ರೆಸ್‌, ಡಿಎಂಕೆ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳ ಸದಸ್ಯರು ಸಭೆಯಲ್ಲಿ ದೂರಿದರು ಎಂದು ಮೂಲಗಳು ಹೇಳಿವೆ.

                 ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನ ಸಭೆಯಲ್ಲಿ ಯುಸಿಸಿಯನ್ನು ಬೆಂಬಲಿಸಿ ಮಾಡಿದ್ದ ಭಾಷಣವನ್ನು ಉಲ್ಲೇಖಿಸುವ ಮೂಲಕ ಬಿಜೆಪಿ ಸದಸ್ಯ ಮಹೇಶ್ ಜೇಠ್ಮಲಾನಿ ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಸಂಸದ ಮಾಣಿಕಂ ಟ್ಯಾಗೋರ್‌ ಅವರು, ಅಂಬೇಡ್ಕರ್‌ ಅವರ ಉದ್ದೇಶ ಪ್ರಶ್ನಾರ್ಹವಲ್ಲ, ಆದರೆ ಮೋದಿ ಸರ್ಕಾರದ ಉದ್ದೇಶದಲ್ಲಿ ಆ ಆಶಯ ಇಲ್ಲ ಎಂದು ಹೇಳಿದರು.

                  'ಯುಸಿಸಿಯು ಬುಡಕಟ್ಟು ವಿರೋಧಿ, ಈಶಾನ್ಯ ರಾಜ್ಯಗಳ ವಿರೋಧಿ ಮತ್ತು ದಮನಿತರ ವಿರೋಧಿಯಾಗಿದ್ದು, 2024ರ ಚುನಾವಣೆಯ ಉದ್ದೇಶವನ್ನು ಹೊಂದಿದೆ' ಎಂದು ಟ್ಯಾಗೋರ್ ದೂರಿದರು.

                'ಹಿಂದಿನ ಕಾನೂನು ಆಯೋಗದ ಎಷ್ಟು ಶಿಫಾರಸುಗಳನ್ನು ಸರ್ಕಾರ ಜಾರಿಗೆ ತಂದಿದೆ' ಎಂದು ಟಿಆರ್‌ಎಸ್‌ ಸಂಸದ ಕೆ. ಸುರೇಶ್‌ ರೆಡ್ಡಿ ಪ್ರಶ್ನಿಸಿದರು.

ತರಾತುರಿ ಏಕೆ: ಬಿಎಸ್‌ಪಿ ಸಂಸದ ಮಲೂಕ್ ನಗರ್ ಅವರು, ಯುಸಿಸಿ ಅನುಷ್ಠಾನದ ತರಾತುರಿಯನ್ನು ಪ್ರಶ್ನಿಸಿದರು. ಅಲ್ಲದೆ ಅವರು, ಈ ವಿಷಯವನ್ನು ಪ್ರತಿ ಪಕ್ಷಗಳು ವಿವಾದವನ್ನಾಗಿಸಿವೆ ಎಂಬುದಾಗಿ ದೂರಿದರು ಎಂದು ಮೂಲಗಳು ತಿಳಿಸಿವೆ.

                 ಯುಸಿಸಿ ಕುರಿತು ಎರಡನೇ ಬಾರಿಗೆ ಸಲಹೆಗಳನ್ನು ಆಹ್ವಾನಿಸಿದ ಕಾನೂನು ಆಯೋಗದ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಸಂಸದ ವಿವೇಕ್ ತಂಖಾ ಮತ್ತು ಡಿಎಂಕೆ ಸಂಸದ ಪಿ. ವಿಲ್ಸನ್ ಅವರು ಸಮಿತಿಗೆ ಪ್ರತ್ಯೇಕವಾಗಿ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದರು.

                ಹಿಂದಿನ ಕಾನೂನು ಆಯೋಗದ ಅವಧಿಯು 2018ರ ಆಗಸ್ಟ್‌ 31ಕ್ಕೆ ಕೊನೆಗೊಂಡಿದೆ. ಈ ಹಂತದಲ್ಲಿ ಯುಸಿಸಿ ಜಾರಿ ಅಗತ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ ಎಂದು ಈ ಆಯೋಗ ತಿಳಿಸಿತ್ತು ಎಂಬುದನ್ನೂ ಅವರು ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

                 ಸಭೆಯ ಆರಂಭದಲ್ಲಿ ಮಾತನಾಡಿದ ಕಾನೂನು ಆಯೋಗದ ಸದಸ್ಯ ಕಾರ್ಯದರ್ಶಿ ಕೆ. ಬಿಸ್ವಾಲ್, ಯುಸಿಸಿ ಕುರಿತು ಜೂನ್ 14ರಿಂದ ಸಾರ್ವಜನಿಕ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಒಟ್ಟು 19.12 ಲಕ್ಷ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries