HEALTH TIPS

ಕೆನಡಾದಲ್ಲಿರುವ ಭಾರತೀಯರಿಗೆ ಸಹಾಯವಾಣಿ ಸ್ಥಾಪಿಸಿ: ಸುನಿಲ್‌ ಜಾಖರ್‌

             ವದೆಹಲಿ: ಭಾರತ ಮತ್ತು ಕೆನಡಾ ದೇಶಗಳ ನಡುವಿನ ರಾಜತಾಂತ್ರಿಕ ಜಗಳದ ನಡುವೆ ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅನಿವಾಸಿ ಭಾರತೀಯರಿಗೆ ಸಹಾಯವಾಣಿಯನ್ನು ಸ್ಥಾಪಿಸುವಂತೆ ಪಂಜಾಬ್‌ ಬಿಜೆಪಿ ಮುಖ್ಯಸ್ಥ ಸುನಿಲ್‌ ಜಾಖರ್‌ ಅವರು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಒತ್ತಾಯಿಸಿದ್ದಾರೆ.

                ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಜಾಖರ್‌ ಅವರು, ಕೆನಡಾದಲ್ಲಿ ನೆಲೆಸಿರುವ ನಾಗರಿಕರ ಕಳವಳದ ಬಗ್ಗೆ ಒತ್ತಿ ಹೇಳಿದ್ದಾರೆ. ಸಮಸ್ಯೆಗೆ ಅಂತಿಮ ಪರಿಹಾರ ಸಿಗುವವರೆಗೆ, ಕೆನಡಾದಲ್ಲಿರುವ ದೇಶದ (ಭಾರತ) ನಾಗರಿಕರ ಸುರಕ್ಷತೆಗಾಗಿ ಕೇಂದ್ರವು ತೆಗೆದುಕೊಳ್ಳುತ್ತಿರುವ ಕ್ರಮಗಳ ಪಟ್ಟಿಯನ್ನು, ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಇದು, ಕೆನಡಾದಲ್ಲಿ ವಾಸಿಸುವ ನಮ್ಮ ಜನರಲ್ಲಿ ಮತ್ತು ವಿಶೇಷವಾಗಿ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ಕಾಯುತ್ತಿರುವ ವಿದ್ಯಾರ್ಥಿಗಳಲ್ಲಿರುವ ಆತಂಕ ನಿವಾರಿಸುವಲ್ಲಿ ಬಹಳ ಪ್ರಮುಖವಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ನಿಮ್ಮ ಕಚೇರಿ ನೀಡುವ ಭರವಸೆಯು, ತಮ್ಮ ಅಧ್ಯಯನದ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಅನುಮಾನಗಳು ಮತ್ತು ಅಭದ್ರತೆಯನ್ನು ನಿವಾರಿಸುತ್ತದೆ ಎಂದು ಜಾಖರ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

                ವಿದೇಶಕ್ಕೆ ಹೋಗಲು ಯೋಜಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ಅಥವಾ ಮಾರ್ಗದರ್ಶನದ ಅಗತ್ಯವಿದ್ದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಲು ವಾಟ್ಸಾಪ್‌ ಸಂಪರ್ಕ ಸಂಖ್ಯೆಯನ್ನು ನೀಡುವಂತೆ ಜಾಖರ್‌ ಸಲಹೆ ನೀಡಿದ್ದಾರೆ. 'ನಮ್ಮ ಅನಿವಾಸಿ ಭಾರತೀಯರು ಮತ್ತು ವಿದ್ಯಾರ್ಥಿಗಳು ಭಾರತೀಯ ಕಾನ್ಸುಲೇಟ್‌ಗಳನ್ನು ಸಂಪರ್ಕಿಸಲು ಮತ್ತು ಸಹಾಯವನ್ನು ಪಡೆಯಲು ಮೀಸಲಾದ ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಅಗತ್ಯ ಮತ್ತು ಮಾರ್ಗದರ್ಶನದ ಸಂದರ್ಭದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಲು ವಿದೇಶಕ್ಕೆ ಹೋಗಲು ಯೋಜಿಸುವ ಭಾರತೀಯ ವಿದ್ಯಾರ್ಥಿಗಳಿಗೆ ವಾಟ್ಸಾಪ್‌ ಸಂಖ್ಯೆಯನ್ನು ಬಿಡುಗಡೆ ಮಾಡಬಹುದಾಗಿದೆ' ಎಂದು ಜಾಖರ್‌ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

                  ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ನೀಡಿರುವ ಹೇಳಿಕೆಯು ಇದೀಗ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries