HEALTH TIPS

ಸಂಸತ್ ಪ್ರವೇಶಿಸುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ, ಹಳೆ ಸಂಸತ್ ಭವನ ನಮಗೆಂದಿಗೂ ಪ್ರೇರಣೆ: ಪ್ರಧಾನಿ ಮೋದಿ

             ನವದೆಹಲಿ: ಸಂಸತ್‌ನಲ್ಲಿ ಸೋಮವಾರ 5 ದಿನಗಳ ವಿಶೇಷ ಅಧಿವೇಶನ ಆರಂಭವಾಗಿದೆ. ಮಂಗಳವಾರ ನೂತನ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾಗುವುದರಿಂದ ಹಾಗೂ ಹಳೆಯ ಭವನದಲ್ಲಿ ಕೊನೆಯ ಅಧಿವೇಶನ ಆಗಿರುವುದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಹಳೆಯ ಸಂಸತ್‌ ಭವನದ ಕುರಿತು ಮಾತನಾಡಿದರು.

                ಹಳೆಯ ಸಂಸತ್‌ ಭವನವು ದೇಶದ ಏಳಿಗೆಯ, ಅಭಿವೃದ್ಧಿಯ ಹಾಗೂ ಪ್ರಜಾಪ್ರಭುತ್ವ ಸಂಕೇತವಾಗಿದೆ. ಸಂಸತ್‌ ಭವನವನ್ನು ಬ್ರಿಟಿಷರು ನಿರ್ಮಿಸಿದರೂ, ಇದರ ನಿರ್ಮಾಣಕ್ಕೆ ಭಾರತೀಯರ ಬೆವರು ಹರಿದಿದೆ, ಭಾರತೀಯರ ಹಣ ಖರ್ಚಾಗಿದೆ. ನಾವು ಹೊಸ ಸಂಸತ್‌ ಭವನ ಪ್ರವೇಶಿಸುತ್ತಿದ್ದರೂ, ಮುಂಬರುವ ಪೀಳಿಗೆಗೆ ಹಳೆಯ ಸಂಸತ್‌ ಭವನದ ಇತಿಹಾಸ, ಶ್ರೇಷ್ಠತೆ, ಕೊಡುಗೆಯನ್ನು ತಿಳಿಸಬೇಕಿದೆ” ಎಂದು ಹೇಳಿದರು.

                ಹಳೆಯ ಸಂಸತ್‌ ಭವನದಿಂದ ಹೊಸ ಸಂಸತ್ತಿಗೆ ತೆರಳುತ್ತಿರುವುದು ಕಷ್ಟವಾಗುತ್ತಿದೆ. ಯಾವುದೇ ಕುಟುಂಬವು ಒಂದು ಮನೆಯನ್ನು ಬಿಟ್ಟು ಹೋಗುವುದು ಎಷ್ಟು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತದೆಯೋ, ಅಷ್ಟೇ ಭಾವನಾತ್ಮಕ ಕ್ಷಣಗಳಿಗೆ ಹಳೆಯ ಸಂಸತ್‌ ಭವನವು ದೂಡಿದೆ. ಆದರೆ, ಈ ಸಂಸತ್‌ ಭವನದ ನೆನಪುಗಳು ಎಂದಿಗೂ ನಮ್ಮ ಸ್ಮೃತಿಪಟಲದಲ್ಲಿ ಇರುತ್ತವೆ. ಸಂಸತ್‌ನಲ್ಲಿ ಅಭಿವೃದ್ಧಿ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ, ಕ್ರಾಂತಿಕಾರಕ ಹೆಜ್ಜೆ ಇರಿಸಲಾಗಿದೆ, 75 ವರ್ಷಗಳಿಂದ ದೇಶದ ಏಳಿಗೆಗೆ ಸಂಸತ್‌ ಭವನ ಸಾಕ್ಷಿಯಾಗಿದೆ. ಸಂಸತ್‌ನಲ್ಲಿ ಕೆಲವೊಮ್ಮೆ ಗಲಾಟೆಯೂ ನಡೆದಿದೆ. ಆದರೆ, ಇದು ದೇಶದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ತಿಳಿಸಿದರು.

                ನಾನು ಮೊದಲ ಬಾರಿಗೆ ಸಂಸತ್‌ ಭವನವನ್ನು ಪ್ರವೇಶಿಸಿದಾಗ, ಭವನದ ಮೆಟ್ಟಿಲುಗಳಿಗೆ ನಾನು ನಮನ ಸಲ್ಲಿಸಿದ್ದೆ. ಪ್ರಜಾಪ್ರಭುತ್ವದಲ್ಲಿ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ನಮನ ಸಲ್ಲಿಸಿದ್ದೆ. ಆಗ ನನಗೆ ಭಾವನಾತ್ಮಕ ಕ್ಷಣವಾಗಿತ್ತು. ಬಡ ಕುಟುಂಬದ ವ್ಯಕ್ತಿಯೊಬ್ಬ ಸಂಸತ್ತಿನ ಮೆಟ್ಟಿಲು ಹತ್ತುವ ಕ್ಷಣವು ನನಗೆ ಭಾವುಕ ಕ್ಷಣವಾಗಿತ್ತು. ನಾನು ಅಂತಹ ಹುದ್ದೆ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ಇದೇ ಪ್ರಜಾಪ್ರಭುತ್ವ ಹಾಗೂ ಸಂಸತ್‌ ಭವನದ ಸೌಂದರ್ಯವಾಗಿದೆ ಎಂದು 2014ರಲ್ಲಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸುವ ವೇಳೆ ನಮನ ಸಲ್ಲಿಸಿದ ಕುರಿತು ಉಲ್ಲೇಖಿಸಿದರು.

              “ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಭಾರತವು ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ. ದೇಶವು ಏಳಿಗೆಯತ್ತ ಸಾಗುತ್ತಿದೆ. ನಾಲ್ಕೂ ದಿಕ್ಕುಗಳಿಂದ ಭಾರತದ ಬಗ್ಗೆ ಹೆಮ್ಮೆ, ಗೌರವದ ಮಾತುಗಳು ಕೇಳಿಬರುತ್ತಿವೆ. ಚಂದ್ರಯಾನ 3 ಮಿಷನ್‌ ಯಶಸ್ಸಿನ ಬಳಿಕವಂತೂ ಜಾಗತಿಕವಾಗಿ ಭಾರತದ ಬಗ್ಗೆ ಅಭಿಪ್ರಾಯವೇ ಬದಲಾಗಿದೆ. ವಿಜ್ಞಾನ, ಇಚ್ಛಾಶಕ್ತಿ, ಜನರ ಸಂಕಲ್ಪದಿಂದ ಇದೆಲ್ಲ ಸಾಕಾರವಾಗಿದೆ. ಸದನದ ಪರವಾಗಿ ದೇಶದ ವಿಜ್ಞಾನಿಗಳಿಗೆ ಕೋಟಿ ಕೋಟಿ ಅಭಿನಂದನೆಗಳು ಎಂದರು.

                ಇದೇ ವೇಳೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಯಶಸ್ಸಿನ ಕುರಿತು ಮೋದಿ ಪ್ರಸ್ತಾಪಿಸಿದರು. “ಜಿ20 ಶೃಂಗಸಭೆಯು ಯಶಸ್ವಿಯಾಗಿದೆ. ಇದು ಯಾವೊಬ್ಬ ವ್ಯಕ್ತಿಯ ಯಶಸ್ಸಲ್ಲ, ಇದು ಭಾರತದ ಯಶಸ್ಸು. ಇದರ ಯಶಸ್ಸನ್ನು ನಾವೆಲ್ಲರೂ ಕೂಡಿ ಸಂಭ್ರಮಿಸಬೇಕಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಜಿ20 ಶೃಂಗಸಭೆಯ ಯಶಸ್ಸಿನ ಶ್ರೇಯಸ್ಸು ಎಲ್ಲರಿಗೂ ಸಲ್ಲಬೇಕಿದೆ. ಅಲ್ಲದೆ, ಜಿ20ಗೆ ಆಫ್ರಿಕಾ ಒಕ್ಕೂಟವನ್ನೂ ಸೇರಿಸಿಕೊಳ್ಳುವ ಸೌಭಾಗ್ಯವೂ ಭಾರತದ್ದಾಯಿತು. ಇದರಿಂದ ಆಫ್ರಿಕಾ ಒಕ್ಕೂಟವು ನಮಗೆ ಧನ್ಯವಾದ ತಿಳಿಸಿತು ಎಂದು ತಿಳಿಸಿದರು.

              ನೂತನ ಸಂಸತ್​ನ ಪ್ರವೇಶದ ದ್ವಾರದಲ್ಲಿ ಜನರಿಗಾಗಿ ಬಾಗಿಲು ತೆರೆಯಿರಿ ಎಂಬ ವಾಕ್ಯವಿದೆ. ಋಷಿ ಮುನಿಗಳು ಇದನ್ನು ಬರೆದಿದ್ದಾರೆ. ಆರಂಭದಲ್ಲಿ ಮಹಿಳಾ ಸದಸ್ಯರ ಸಂಖ್ಯೆ ತುಂಬಾ ಕಡಿಮೆ ಇತ್ತು. ದಿನ ಕಳೆದಂತೆ ಮಹಿಳಾ ಸದಸ್ಯರ ಸಂಖ್ಯೆಯೂ ಹೆಚ್ಚಳವಾಗಿದೆ. ವಾದ-ಪ್ರತಿವಾದ ಪ್ರತಿಯೊಂದು ನಮಗೆ ಅನುಭವ ಆಗಿದೆ. ನಮ್ಮ ಕುಟುಂಬದ ನಡುವೆ ವಾದ ಆಗಿದೆ. ಈವರೆಗೂ 7,500 ಸಂಸದರು ಸಂಸತ್​ನಲ್ಲಿ ಸೇವೆ ಸಲ್ಲಿಸಿದ್ದಾರೆ. 600ಕ್ಕೂ ಹೆಚ್ಚು ಮಹಿಳೆಯರು ಸಂಸತ್​​ನ ಗೌರವ ಹೆಚ್ಚಿಸಿದ್ದಾರೆ. ಎರಡು ಸದನಗಳ ಸದಸ್ಯರು ಸಂಸತ್ ಮೂಲಕ ಸೇವೆ ಸಲ್ಲಿಸಿದ್ದಾರೆ.

                ಕಠಿಣ ಸಂದರ್ಭದಲ್ಲೂ ಸಂಸದರು ಜವಾಬ್ದಾರಿ ನಿಭಾಯಿಸಿದ್ದಾರೆ. ಇಳಿ ವಯಸ್ಸಿನಲ್ಲೂ ಕೆಲ ಸಂಸದರು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅನಾರೋಗ್ಯದ ನಡುವೆಯೂ ಕಲಾಪಕ್ಕೆ ಸದಸ್ಯರು ಹಾಜರಾಗಿದ್ದಾರೆ. ಕೊರೋನಾ ಸಂದರ್ಭದಲ್ಲೂ ಸಂಸತ್ ನಡೆಸಲಾಯಿತು. ರಾಷ್ಟ್ರದ ಕೆಲಸ ನಿಲ್ಲಬಾರದು ಎಂದು ಕಲಾಪ ನಡೆಸಲಾಯಿತು. ಕೆಲವು ಮಾಜಿ ಸಂಸದರು ಸಂಸತ್​​ಗೆ ನಿರಂತರ ಭೇಟಿ ನೀಡುತ್ತಾರೆ. ಇದು ದೇಶದ ಸಂಸತ್​​ನ ತಾಕತ್ತು. ಇಲ್ಲೇ 2 ವರ್ಷ 11 ತಿಂಗಳು ಸಂವಿಧಾನದ ರಚನಾ ಸಮಿತಿ ಸಭೆ ಆಯ್ತು. ಸಂವಿಧಾನವನ್ನು ನಾವು ಇಲ್ಲೇ ಒಪ್ಪಿಕೊಂಡೆವು. ಬಹಳಷ್ಟು ನೌಕರರು, ಕಾರ್ಮಿಕರು ಸಂಸತ್​​ನಲ್ಲಿ ಕೆಲಸ ಮಾಡಿದ್ದಾರೆ. ದೇಶವನ್ನು ಮುನ್ನಡೆಸುವ ಪ್ರಕ್ರಿಯೆಯಲ್ಲಿ ಅವರು ಕೆಲಸ ಮಾಡಿದ್ದಾರೆ. ಹೀಗಾಗಿ ಸಂಸತ್​ ಸಿಬ್ಬಂದಿಗೂ ವಿಶೇಷವಾಗಿ ಧನ್ಯವಾದ ಹೇಳುತ್ತೇನೆ.

             ಸಂಸತ್ ಭವನದ ಮೇಲೂ ಭಯೋತ್ಪಾದಕರ ದಾಳಿ ನಡೆಯಿತು. ಸಂಸದರನ್ನು ಉಳಿಸಲು ಭದ್ರತಾ ಸಿಬ್ಬಂದಿ ಜೀವ ಕಳೆದುಕೊಂಡರು. ಭದ್ರತಾ ಸಿಬ್ಬಂದಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಪತ್ರಕರ್ತರು ಸಂಸತ್ ಕಲಾಪಗಳಿಗೆ ಜೀವಂತ ಸಾಕ್ಷಿಯಾಗಿದ್ದಾರೆ. ತಂತ್ರಜ್ಞಾನ ವ್ಯವಸ್ಥೆ ಇಲ್ಲದಿದ್ದಾಗಲೂ ನಿಖರ ಸುದ್ದಿ ತಲುಪಿಸುತ್ತಿದ್ದರು. ಭಾರತದ ವಿಕಾಸ ಯಾತ್ರೆಯಲ್ಲಿ ಪತ್ರಕರ್ತರ ಸೇವೆ ಮರೆಯಲು ಆಗಲ್ಲ. ದೇಶದ ಕನ್ನಡಿಯಂತೆ ಪತ್ರಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಹಳೇ ಸಂಸತ್​ ಭವನ ಬಿಟ್ಟು ಹೋಗಲು ದುಃಖ ಆಗುತ್ತಿದೆ. ಪತ್ರಕರ್ತರಿಗೂ ಕೂಡ ನಮಗಿಂತ ಹೆಚ್ಚು ದುಃಖ ಆಗುತ್ತದೆ. ನಮಗಿಂತ ಹೆಚ್ಚು ಸಮಯ ಪತ್ರಕರ್ತರು ಇಲ್ಲಿ ಕಳೆದಿದ್ದಾರೆ. ಸಂಸತ್​ ಕಲಾಪದ ವರದಿ ಮಾಡಿದ ಮಾಧ್ಯಮಗಳಿಗೂ ಧನ್ಯವಾದ ಎಂದು ಹೇಳಿದರು.

               ಪ್ರಧಾನಮಂತ್ರಿ ನರೇಂದ್ರ ಮೋದಿ 10 ಡಿಸೆಂಬರ್ 2020ರಂದು ಹೊಸ ಸಂಸತ್ತಿನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದರು. 28 ಮೇ 2023 ರಂದು ಭವ್ಯ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸಿದ್ದರು. ನೂತನ ಸಂಸತ್ ಕಟ್ಟಡದ ಕೆಲಸವನ್ನು 29 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ತ್ರಿಕೋನಾಕಾರದಲ್ಲಿ ಕಟ್ಟಡದ ವಿನ್ಯಾಸವಿದೆ. 64,500 ಚದರ ಮೀಟರ್‌ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. 862 ಕೋಟಿ ರೂಪಾಯಿ ವ್ಯಯಿಸಲಾಗಿದೆ.

               ಹಳೆಯ ಸಂಸತ್ ಭವನವು ಲೋಕಸಭೆಯಲ್ಲಿ 545 ಮತ್ತು ರಾಜ್ಯಸಭೆಯಲ್ಲಿ 245 ಸಂಸದರಿಗೆ ಆಸನ ವ್ಯವಸ್ಥೆ ಹೊಂದಿದೆ. ಆದರೆ, ಹೊಸ ಕಟ್ಟಡದಲ್ಲಿ 888 ಸಂಸದರು ಲೋಕಸಭೆಯಲ್ಲಿ ಕುಳಿತುಕೊಳ್ಳಬಹುದು. ಜಂಟಿ ಅಧಿವೇಶನದ ಸಂದರ್ಭದಲ್ಲಿ 1,272 ಸಂಸದರು ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. 384 ಸಂಸದರು ಸುಲಭವಾಗಿ ರಾಜ್ಯಸಭಾ ಕೊಠಡಿಯಲ್ಲಿ ಕುಳಿತುಕೊಳ್ಳಬಹುದು. ಹೊಸ ಸಂಸತ್ತಿನಲ್ಲಿ ಲೋಕಸಭೆಯ ಚೇಂಬರ್ ಅನ್ನು ರಾಷ್ಟ್ರೀಯ ಪಕ್ಷಿ ನವಿಲು ಮತ್ತು ರಾಜ್ಯಸಭಾ ಚೇಂಬರ್ ಅನ್ನು ರಾಷ್ಟ್ರೀಯ ಹೂವು ಕಮಲದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries