ತಿರುವನಂತಪುರ: ಮುಸ್ಲಿಂ ಮಹಿಳೆಯರು ಧರಿಸುವ ಶಿರವಸ್ತ್ರ (ಹಿಜಾಬ್) ಕುರಿತು ಆಡಳಿತಾರೂಢ ಸಿಪಿಎಂನ ಹಿರಿಯ ಮುಖಂಡ ಕೆ.ಅನಿಲಕುಮಾರ್ ನೀಡಿದ್ದಾರೆ ಎನ್ನಲಾದ ಹೇಳಿಕೆ ವಿವಾದದ ಸ್ವರೂಪ ಪಡೆದಿದ್ದು, ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿದೆ.
ಮುಖಂಡನ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದಲ್ಲದೇ, ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಿಪಿಎಂ, ಪಕ್ಷದ ಮುಖಂಡ ನೀಡಿರುವ ಹೇಳಿಕೆಯನ್ನು ತಿರಸ್ಕರಿಸುವುದಾಗಿ ಹೇಳಿದೆ.
'ಯಾವ ವಸ್ತ್ರ ಧರಿಸಬೇಕು ಎಂಬ ಆಯ್ಕೆಯು ವ್ಯಕ್ತಿಯ ಮೂಲಭೂತ ಹಕ್ಕಾಗಿದ್ದು, ಈ ಕುರಿತು ಪಕ್ಷವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವ ಅಗತ್ಯವಿಲ್ಲ' ಎಂದು ಸಿಪಿಎಂ ಹೇಳಿದೆ.
ಅನಿಲಕುಮಾರ್ ಹೇಳಿಕೆಯನ್ನು ಖಂಡಿಸಿರುವ ವಿರೋಧ ಪಕ್ಷ ಕಾಂಗ್ರೆಸ್, 'ಈ ಹೇಳಿಕೆ ಅಸಂಬದ್ಧ' ಎಂದಿದೆ.
ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿರುವ ಅನಿಲಕುಮಾರ್, 'ಎಸೆನ್ಸ್ ಗ್ಲೋಬಲ್' ಎಂಬ ಸಂಘಟನೆ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 'ಮಲಪ್ಪುರಂ ಜಿಲ್ಲೆಯಲ್ಲಿ ಮುಸ್ಲಿಮರ ಸಂಖ್ಯೆ ಅಧಿಕವಾಗಿದೆ. ಸಿಪಿಎಂನ ಪ್ರಭಾವದಿಂದಾಗಿಯೇ ಜಿಲ್ಲೆಯ ಮುಸ್ಲಿಂ ಮಹಿಳೆಯರು ಶಿರವಸ್ತ್ರ (ತಟ್ಟಂ) ಧರಿಸುವುದನ್ನು ತೊರೆದಿದ್ದಾರೆ' ಎಂದು ಹೇಳಿದ್ದರು.
ಅನಿಲಕುಮಾರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಸುನ್ನಿ ವಿದ್ವಾಂಸರನ್ನು ಒಳಗೊಂಡ ಸಂಘಟನೆ 'ಸಮಸ್ಥ', 'ಈ ಹೇಳಿಕೆಯಿಂದ ಸಿಪಿಎಂನ ದ್ವಂದ್ವ ನಿಲುವು ಬಹಿರಂಗವಾಗಿದೆ' ಎಂದು ಟೀಕಿಸಿತ್ತು.
'ಸ್ವಧರ್ಮವನ್ನು ತೊರೆಯುವುದು ಎಡ ಪಕ್ಷಗಳ ತಿರುಳು. ಆದರೆ, ಮತಗಳಿಗಾಗಿ ಸಿಪಿಎಂ ಅಲ್ಪಸಂಖ್ಯಾತರನ್ನು ಓಲೈಸುತ್ತದೆ' ಎಂದು 'ಸಮಸ್ಥ' ಸಂಘಟನೆಯ ಮುಖಂಡ ಅಬ್ದುಸಮದ್ ಪೂಕ್ಕೊಟ್ಟೂರ್ ಹೇಳಿದ್ದಾರೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಮುಖಂಡರಾದ ಕೆ.ಎಂ.ಶಾಜಿ ಹಾಗೂ ಕೆ.ಪಿ.ಎ.ಮಜೀದ್ ಕೂಡ ಅನಿಲಕುಮಾರ್ ಹೇಳಿಕೆಯನ್ನು ಖಂಡಿಸಿದ್ದಾರೆ.