ನವದೆಹಲಿ: ದೇಶದಲ್ಲಿ ಹಿಂದುತ್ವದ ರಕ್ಷಣೆಗಾಗಿ ಮಾರ್ಗಸೂಚಿಗಳನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿಹಾಕಿದೆ.
ಈ ರೀತಿಯ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರ ನೇತೃತ್ವದ ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲ ಅವರು ಈ ಪೀಠದ ಭಾಗವಾಗಿದ್ದಾರೆ.
'ಕೆಲವರು ಬಂದು ದೇಶದಲ್ಲಿ ಇಸ್ಲಾಮನ್ನು ರಕ್ಷಣೆ ಮಾಡಿ ಎಂದು ಹೇಳುತ್ತಾರೆ. ಇನ್ನು ಕೆಲವರು ಬಂದು ಕ್ರೈಸ್ತ ಧರ್ಮವನ್ನು ರಕ್ಷಣೆ ಮಾಡಿ ಎಂದು ಹೇಳುತ್ತಾರೆ. ಯಾರು ಏನು ಮಾಡಬೇಕು ಎನ್ನುವುದು ಅರ್ಜಿದಾರರು ಹೇಳುವ ಹಾಗಿಲ್ಲ' ಎಂದು ಕೋರ್ಟ್ ವಿಚಾರಣೆ ವೇಳೆ ಹೇಳಿದೆ.
'ನೀವು ಏನೋ ಮಾಡಿಕೊಂಡಿದ್ದೀರಿ. ನೀವು ಅದನ್ನು ಪ್ರಚಾರ ಮಾಡಬಹುದು. ಅದರಿಂದ ನಿಮ್ಮನ್ನು ಯಾರೂ ತಡೆಯುತ್ತಿಲ್ಲ. ಆದರೆ, ಅದನ್ನೇ ಎಲ್ಲರೂ ಮಾಡಬೇಕು ಎಂದು ನೀವು ಹೇಳುವ ಹಾಗಿಲ್ಲ' ಎಂದು ಅರ್ಜಿಯನ್ನು ತಿರಸ್ಕರಿಸುವ ವೇಳೆ ಸುಪ್ರೀಂ ಕೋರ್ಟ್ ಹೇಳಿದೆ.
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಈ ಅರ್ಜಿಯನ್ನು ಸಲ್ಲಿಸಿದ್ದು, ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದರು.