ನವದೆಹಲಿ: ತೀರಾ ಅಸಾಮಾನ್ಯ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಯಾವುದೇ ಪ್ರಕರಣಗಳನ್ನು ಇತ್ಯರ್ಥಪಡಿಸಲು ಯಾವುದೇ ನ್ಯಾಯಾಲಯಕ್ಕೆ ಸಮಯಮಿತಿಯನ್ನು ನಿಗದಿ ಮಾಡಲು ಸಾಂವಿಧಾನಿಕ ನ್ಯಾಯಾಲಯಗಳು ಮುಂದಾಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
0
samarasasudhi
ನವೆಂಬರ್ 13, 2023
ನವದೆಹಲಿ: ತೀರಾ ಅಸಾಮಾನ್ಯ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಯಾವುದೇ ಪ್ರಕರಣಗಳನ್ನು ಇತ್ಯರ್ಥಪಡಿಸಲು ಯಾವುದೇ ನ್ಯಾಯಾಲಯಕ್ಕೆ ಸಮಯಮಿತಿಯನ್ನು ನಿಗದಿ ಮಾಡಲು ಸಾಂವಿಧಾನಿಕ ನ್ಯಾಯಾಲಯಗಳು ಮುಂದಾಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕ್ರಿಮಿನಲ್ ಪ್ರಕರಣವೊಂದನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಅರ್ಜಿಯೊಂದನ್ನು ವಜಾಗೊಳಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೀಗೆ ಹೇಳಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠವು, ಹೈಕೋರ್ಟ್ಗಳಲ್ಲಿ ಜಾಮೀನು ಅರ್ಜಿಗಳ ಸಂಖ್ಯೆಯು ದೊಡ್ಡದಿರುವ ಕಾರಣ ಇಂತಹ ಅರ್ಜಿಗಳನ್ನು ಇತ್ಯರ್ಥಪಡಿಸುವಾಗ ಒಂದಿಷ್ಟು ವಿಳಂಬ ಆಗುತ್ತದೆ ಎಂದು ಹೇಳಿದೆ.
'ಪ್ರತಿ ಹೈಕೋರ್ಟ್ನಲ್ಲಿ, ಪ್ರತಿ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿ ಇರುವ ಪ್ರಕರಣಗಳ ಸಂಖ್ಯೆಯು ದೊಡ್ಡದಿದೆ. ಹೀಗಾಗಿ, ಪರಿಸ್ಥಿತಿಯು ತೀರಾ ಅಸಾಮಾನ್ಯ ಅಲ್ಲ ಎಂದಾದರೆ, ಸಾಂವಿಧಾನಿಕ ನ್ಯಾಯಾಲಯಗಳು ಯಾವುದೇ ನ್ಯಾಯಾಲಯದ ಮುಂದಿರುವ ಯಾವುದೇ ಪ್ರಕರಣದ ಇತ್ಯರ್ಥಕ್ಕೆ ಕಾಲಮಿತಿ ನಿಗದಿ ಮಾಡುವುದರಿಂದ ದೂರವಿರಬೇಕು' ಎಂದು ನ್ಯಾಯಪೀಠ ಹೇಳಿದೆ.
ತಾವು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಬಾಂಬೆ ಹೈಕೋರ್ಟ್ಗೆ ಸೂಚಿಸಬೇಕು ಎಂದು ಕೋರಿ ಶೇಖ್ ಉಜ್ಮಾ ಫಿರೋಜ್ ಹುಸೇನ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.