ಆಲಪ್ಪುಳ: ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ. ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಪ್ರಕರಣದ ಎಲ್ಲಾ 15 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಮಾವೇಲಿಕ್ಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ವಿ.ಜಿ. ಶ್ರೀದೇವಿ ಮಂಗಳವಾರ ಈ ಮಹತ್ತರ ಶಿಕ್ಷೆ ನೀಡಿದರು.
ಆರೋಪಿಗಳ ವಿರುದ್ಧ ಕೊಲೆಯ ಜೊತೆಗೆ ಐಪಿಸಿ ಸೆಕ್ಷನ್ 449, 447, 506(2), 324, 323, 341 ಮತ್ತು 201 ರ ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ಸಾಕ್ಷಿ ನಾಶ, ಸಾಕ್ಷಿಗಳಿಗೆ ಬೆದರಿಕೆ ಮತ್ತು ಅತಿಕ್ರಮಣ ಆರೋಪದಡಿಯಲ್ಲಿ ಆರೋಪ ಹೊರಿಸಲಾಗಿದೆ.
ರಂಜಿತ್ ನನ್ನು ಆರೋಪಿಗಳು ಸುತ್ತಿಗೆಯಿಂದ ಬರ್ಬರವಾಗಿ ಹೊಡೆದು ಕೊಲೆ ಮಾಡಿದ್ದರು. ಇವರೆಲ್ಲರೂ ಪಿಎಫ್ಐ ಬೆಂಬಲಿಗರು. ಆ. 20 ರಂದು ಮಾವೇಲಿಕ್ಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮೊದಲ ಚಾರ್ಜ್ ಶೀಟ್ನಲ್ಲಿ ಸೇರಿಸಲಾದ ಎಲ್ಲಾ 15 ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ಪ್ರಕಟಿಸಿತ್ತು. ಪ್ರಕರಣದಲ್ಲಿ ಒಂದರಿಂದ ಎಂಟು ಆರೋಪಿಗಳು ನೇರವಾಗಿ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯವು ಗುರುತಿಸಿದೆ. ಅಲ್ಲದೇ ರಂಜಿತ್ ಮನೆಗೆ ನುಗ್ಗಿರುವುದು ಸಾಬೀತಾಗಿದೆ.
ಪ್ರಕರಣದ ಆರೋಪಿಗಳಾದ ನವಾಜ್, ಶಮೀರ್, ನಾಸೀರ್, ಜಾಕೀರ್ ಹುಸೇನ್, ಶಾಜಿ ವೂವತ್ತಿಕಲ್, ಶೆರ್ನಾಜ್ ಅಶ್ರಫ್, ನಿಜಾಮ್, ಅಜ್ಮಲ್, ಅನೂಪ್, ಮಹಮ್ಮದ್ ಅಸ್ಲಾಂ, ಸಲಾಂ ಪೆÇನ್ನಾಡ್, ಅಬ್ದುಲ್ ಕಲಾಂ, ಸಫರುದ್ದೀನ್, ಮುನ್ಶಾದ್, ಜಸೀಬ್ ರಾಜಾ ಅವರಿಗೆ ಮರಣದಂಡನೆ ವಿಧಿಸಲಾಗಿದೆ.
ಇದೊಂದು ಅಪರೂಪದ ಪ್ರಕರಣವಾಗಿದ್ದು, ಗರಿಷ್ಠ ಶಿಕ್ಷೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಇದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಡಿಸೆಂಬರ್ 19, 2021 ರಂದು ರಂಜಿತ್ ಶ್ರೀನಿವಾಸನ್ ಅವರನ್ನು ಅವರ ತಾಯಿ, ಪತ್ನಿ ಮತ್ತು ಮಗಳ ಮುಂದೆ ಪಿಎಫ್ ಐ ಕಾರ್ಯಕರ್ತರ ತಂಡ ಬರ್ಬರವಾಗಿ ಹತ್ಯೆಗೈದಿತ್ತು. ಅಲಪ್ಪುಳ ವೆಲ್ಲಕಿನಾರ್ ನಲ್ಲಿರುವ ಮನೆಗೆ ನುಗ್ಗಿ ಕೊಲೆ ನಡೆಸಲಾಗಿತ್ತು. ತಿಂಗಳ ಸಂಚಿನ ನಂತರ ಹತ್ಯೆ ನಡೆಸಲಾಗಿದೆ.
ಪ್ರಕರಣದ ತೀರ್ಪಿನ ಹೇಳಿಕೆ ಹಿನ್ನೆಲೆಯಲ್ಲಿ ಅಲಪ್ಪುಳ ಜಿಲ್ಲೆಯಲ್ಲಿ ಪೋಲೀಸರು ಭಾರೀ ನಿರ್ಬಂಧಗಳನ್ನು ಹೇರಿದ್ದಾರೆ. ನ್ಯಾಯಾಲಯ ಮತ್ತು ಸುತ್ತಮುತ್ತ ಎಚ್ಚರಿಕೆ ನೀಡಲಾಗಿದೆ.