ಬದಿಯಡ್ಕ: ಪೆರಡಾಲ ಸರ್ಕಾರಿ ಶಾಲೆಯಲ್ಲಿ ಗಣಿತೋತ್ಸವ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ಭಾಗವಾಗಿ ಕೇರಳದ ಶಾಲೆಗಳ ಯು.ಪಿ. ವಿಭಾಗದಲ್ಲಿ ನಡೆಯುವಂತಹ ಗಣಿತೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಅವರು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಕರೋಡಿಯವರ ಅಧ್ಯಕ್ಷತೆಯಲ್ಲಿ ನಿರ್ವಹಿಸಿದರು.
ಮುಖ್ಯ ಅತಿಥಿಗಳಾಗಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ. ಹಾಗೂ ಕುಂಬಳೆ ಉಪ ಜಿಲ್ಲಾ ಸಂಯೋಜನಾಧಿಕಾರಿ ಜಯರಾಮ್ ಶುಭ ಹಾರೈಸಿದರು. ಬಿ.ಆರ್.ಸಿ. ಸಂಯೋಜಕಿ ಭಾರತಿ ಟೀಚರ್, ನೌಕರ ಸಂಘದ ಕಾರ್ಯದರ್ಶಿ ರಿಶಾದ್ ಪಿ.ಎಂ.ಎ, ಹೈಸ್ಕೂಲಿನ ಎಸ್.ಆರ್.ಜಿ. ಕನ್ವೀನರ್ ಡಾ.ಜಯಕೃಷ್ಣನ್ ಉಣ್ಣಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯೋಪಾಧ್ಯಾಯನಿ ಬೀನಾ ಎ.ಆರ್. ಸ್ವಾಗತಿಸಿ, ಯುಪಿಎಸ್ಆರ್ಜಿ ಕನ್ವೀನರ್ ಶ್ರೀಧರ ಭಟ್ ವಂದಿಸಿದರು. ಸಂಚಾಲಕ ರಾಜೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಮಕ್ಕಳು ಅಧ್ಯಾಪಕರು ನಿರ್ಮಿಸಿದ ಗಣಿತ ಸಂಚಿಕೆ, ಗಣಿತ ಕಾರ್ಯಪತ್ರ, ಗಣಿತ ಓದುವ ಕಾರ್ಡುಗಳು, ಗಣಿತ ನಿಘಂಟು, ಗಣಿತ ಕ್ವಶ್ಚನ್ ಬ್ಯಾಂಕ್ ಇತ್ಯಾದಿಗಳನ್ನು ಬಿಡುಗಡೆ ಮಾಡಲಾಯಿತು. ನಂತರ ಮಕ್ಕಳಿಂದ ಗಣಿತ ಪದ್ಯ, ಗಣಿತ ಕಥೆ, ಗಣಿತ ರಸಪ್ರಶ್ನೆ, ಒಗಟು, ಗಣಿತ ದೋಣಿ ಹಾಡು, ಗಣಿತ ಒಪ್ಪನ ಮೊದಲಾದ ಕಾರ್ಯಕ್ರಮಗಳು ನಡೆದುವು. ಕಾರ್ಯಕ್ರಮದಲ್ಲಿ ಅಧ್ಯಾಪಕರು ಹೆತ್ತವರು ಭಾಗವಹಿಸಿದ್ದರು.