ತಿರುವನಂತಪುರ: 'ನೆಹರೂ ವಂಶಸ್ಥರಿಂದ ನಿರೀಕ್ಷಿಸುವ ಗುಣಮಟ್ಟವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರದರ್ಶಿಸುತ್ತಿಲ್ಲ, ಈ ಕಾರಣಕ್ಕೆ ಅವರ ಡಿಎನ್ಎಯನ್ನು ಪರೀಕ್ಷೆ ಮಾಡುವ ಅಗತ್ಯ ಇದೆ' ಎಂದು ಸಿಪಿಎಂ ಬೆಂಬಲಿತ ಸ್ವತಂತ್ರ ಶಾಸಕ ಪಿ.ವಿ. ಅನ್ವರ್ ಅವರು ಲೇವಡಿ ಮಾಡಿದ್ದಾರೆ.
ಪಾಲಕ್ಕಾಡ್ನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ವರ್ ಅವರು, 'ರಾಹುಲ್ ಅವರು ಗಾಂಧಿ ಎಂಬ ಉಪನಾಮವನ್ನೂ ಬಳಸಲಾಗದ ನಾಲ್ಕನೇ ದರ್ಜೆಯ ವ್ಯಕ್ತಿಯಾಗಿದ್ದಾರೆ. ನೆಹರೂ ವಂಶದ ವ್ಯಕ್ತಿಗೆ ಈ ರೀತಿ ಮಾತನಾಡಲು ಸಾಧ್ಯವೇ? ಆ ವಿಚಾರದಲ್ಲಿ ನನಗೆ ಸಂಶಯವಿದೆ' ಎಂದು ಹೇಳಿದ್ದಾರೆ.
ಅನ್ವರ್ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಹಂಗಾಮಿ ಅಧ್ಯಕ್ಷ ಎಂ.ಎಂ. ಹಸನ್ ಆಗ್ರಹಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೂ ದೂರು ನೀಡಿದೆ.
ಅನ್ವರ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಹಸನ್ ಆರೋಪಿಸಿದ್ದಾರೆ.