ಮಂಜುಳಾಪುರವು ಮಂಜೇಶ್ವರ ಹೊಳೆಯ ಉತ್ತರ ಮತ್ತು ದಕ್ಷಿಣ ದಡಗಳಲ್ಲಿ ವ್ಯಾಪಿಸಿದೆ. ಕಡಲಿನ ಕರೆಯಲ್ಲಿ ಕಾವಲಿರುವ ತಳವರರಂತೆ ತೆಂಗುಗಳು ಓರಣವಾಗಿ ನಿಂತಿವೆ. ಹಣ್ಣಡಕೆಯ, ಹೊಂಬಾಳೆಯ ಗೊನೆಗಳು ಬೀದಿಗೆ ತೋರಣ ಕಟ್ಟಿವೆ. ಚಿಗುರಿನ ಗೊಂಚಲು ಮಲ್ಲಿಗೆಯ ಮೊಲ್ಲೆಯು ಬಾಗಿಲಲ್ಲಿ ಜಲ್ಲಿ ಬಿಟ್ಟಿವೆ. ಹೊಲಗಳಲ್ಲಿ ಬೆಳೆದ ಕಳವೆ ತೆÉನೆಯು ರತ್ನಗಂಬಳಿಯಂತೆ ಹಾಸಿದೆ. ಐಸಿರಿಯ ಮನೆ ಮಠಗಳಿಂದ ಹೊರಹೊಮ್ಮುವ ಹಾಡು ಗೀತಗಳಿ0ದ, ಅಂಗಡಿಕೇರಿಯ ಕಲಕಲ ರವದಿಂದ, ವನಗಳ ಶುಕ ಪಿಕ ಮೊದಲಾದ ಪಕ್ಷಿ ಸಂಕುಲದ ಮಂಜುಳ ಘೋಷದಿಂದ ಅದು ಮಂಜುಳ ಕ್ಷೇತ್ರ-ಮಂಜುಳಾಪುರವೆನಿಸಿದೆ.
ಈ ಕ್ಷೇತ್ರವನ್ನು ವಾಸುಕೀ ಕ್ಷೇತ್ರವೆಂದೂ ಭಾರ್ಗವನು ಇಲ್ಲಿ ಮಂಜರೀಶ ಎಂಬ ಲಿಂಗವನ್ನು ಪ್ರತಿಷ್ಠಿಸಿದುದರಿಂದ ಮಂಜೇಶ್ವರವೆಂದೂ ಕರೆಯುವರು. ಮಂಜೇಶ್ವರ ಬಂದರು ವ್ಯಾಪಾರಕ್ಕೆ ಹೆಸರಾಗಿದ್ದಿತು. ಚೀ, ಅರೇಬಿಯಾ, ಪರ್ಶಿಯಾ ದೇಶಗಳೊಡನೆ ವಾಣಿಜ್ಯವನ್ನು ನಡೆಸುತ್ತಿದ್ದಿತು. ಕ್ರಿ..ಶ. ಒಂದನೇ ಶತಮಾನದಲ್ಲಿ ಜೈನರು ತುಳು ದೇಶಕ್ಕೆ ಬಂದು ರಾಜ್ಯವನ್ನು ವಿಸ್ತರಿಸಿದರು. ಆಡಳಿತಕ್ಕೆ ಅನುಕೂಲವಾಗುವಂತೆ ವಿಸ್ತಾರವಾದ ರಾಜ್ಯವನ್ನು ಸಣ್ಣ ಸಣ್ಣ ಸೀಮೆಗಳನ್ನಾಗಿ ವಿಂಗಡಿಸಿ ಒಂದೊಂದು ಸೀಮೆಗೆ ಒಬ್ಬೊಬ್ಬ ಬಲ್ಲಾಳ ಅಥವಾ ಹೆಗ್ಗಡೆಯನ್ನು ನೇಮಿಸಿದರು. ಮಂಜೇಶ್ವರ ಸೀಮೆಗೂ ಒಬ್ಬ ಬಲ್ಲಾಳನಿದ್ದನು. ಉದ್ಯಾವರ, ಹೊಸಬೆಟ್ಟು, ಬಡಾಜೆ, ತಲೆಕಳ, ಕಡಂಬಾರ, ಮೀಂಜ, ಕುಳೂರು, ಮೂಡಂಬೈಲು, ಮಜಿಬೈಲು ಮತ್ತು ಮಂಜೇಶ್ವರ(ಈಗಿನ ಬಂಗರ ಮಂಜೇ ಶ್ವರ) ಎಂಬ ಹತ್ತು ಗ್ರಾಮಗಳು ಅವನ ಅಧೀನದಲ್ಲಿದ್ದವು. ಅವನ ಬೀಡು ಈಗಿನ ಬಂಗರ ಮಂಜೇಶ್ವರದ ಜೈನರ ಪೇಟೆಯಲ್ಲಿ- ಮಸೀದಿ ಇರುವ ಸ್ಥಳದಲ್ಲಿದ್ದಿತು. ಮುಸಲ್ಮಾನರು ಆ ಬಳಿಕ ಮಂಜೇಶ್ವರದ ಉದ್ಯಾವರಕ್ಕೆ ಬಂದು ನೆಲಸಿದರು. ಇಲ್ಲಿ ಅವರು ಬಂದು ದೊಡ್ಡ ಮಸೀದಿಯನ್ನು ಕಟ್ಟಿಸಿ ಒಂದು ಕೆರೆಯನ್ನು ತೋಡಿಸಿದರು. ಇದರ ಬಳಿಯಲ್ಲಿ ಅರಬಿ ಸಾಹುಕಾರರ ಒಂದುದೊಡ್ಡ ಭಂಡಸಾಲೆಯಿತ್ತು. ಇದರ ಮುಂದುಗಡೆಯಲ್ಲಿ ಪಾಂಡೆಲಪಳ್ಳಿ (ಭಂಡಸಾಲೆ ಪÀಳ್ಳಿ) ಎಂಬ ಒಂದು ಹಳ್ಳಿ ಇತ್ತು. ಮಂಜೇಶ್ವರ ಹೊಳೆಯಿಂದ ಉಪ್ಪಳ ಹೊಳೆಯ ವರೆಗಿನ ಬಂಗರ ಕಾಲದ ಒಂದು ಕೋಟೆಯು ಭಗ್ನವಾಗಿ ಹೋಗಿತ್ತು. ಕೆಳದಿಯ ವೆಂಕಟಪ್ಪ ನಾಯಕನು ಕ್ರಿ. ಶ. 1608 ರಲ್ಲಿ ಅಳಿವೆ ಬಾಗಿಲ ಬಂಡೆಯ ಮೇಲೆ ಒಂದು ಭದ್ರವಾದ ಕೋಟೆಯನ್ನು ಕಟ್ಟಿಸಿದನು.
(ನಾಳೆಗೆ ಮುಂದುವರಿಯುವುದು.)






