ವಯನಾಡ್: ಭೂಕುಸಿತದ ಸ್ಥಳದಲ್ಲಿ ಅವಶೇಷಗಳಡಿಯಿಂದ ಮೇಲಕ್ಕೆತ್ತಿರುವ ಕೆಲವು ಮೃತದೇಹಗಳನ್ನು ಇನ್ನೂ ಗುರುತು ಹಿಡಿಯಲು ಸಾಧ್ಯವಾಗಿಲ್ಲ ಮತ್ತು ಅವುಗಳನ್ನು ಕೊಂಡೊಯ್ಯಲು ಯಾರೂ ಮುಂದೆ ಬಂದಿಲ್ಲ.
0
samarasasudhi
ಆಗಸ್ಟ್ 04, 2024
ವಯನಾಡ್: ಭೂಕುಸಿತದ ಸ್ಥಳದಲ್ಲಿ ಅವಶೇಷಗಳಡಿಯಿಂದ ಮೇಲಕ್ಕೆತ್ತಿರುವ ಕೆಲವು ಮೃತದೇಹಗಳನ್ನು ಇನ್ನೂ ಗುರುತು ಹಿಡಿಯಲು ಸಾಧ್ಯವಾಗಿಲ್ಲ ಮತ್ತು ಅವುಗಳನ್ನು ಕೊಂಡೊಯ್ಯಲು ಯಾರೂ ಮುಂದೆ ಬಂದಿಲ್ಲ.
ಅವಶೇಷಗಳಡಿ ದೊರೆತಿರುವ ಮಾನವನ ಅಂಗಾಂಗಗಳು ಮತ್ತು ಇನ್ನೂ ಗುರುತು ಹಿಡಿಯಲು ಆಗದೇ ಇರುವ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಪ್ರತಿಯೊಂದು ಮೃತದೇಹ ಅಥವಾ ದೇಹದ ಅಂಗಾಂಗಗಳಿಗೆ ನಿರ್ದಿಷ್ಟ ಗುರುತಿನ ಸಂಖ್ಯೆ ನಿಗದಿಪಡಿಸಬೇಕು ಎಂದು ವಿಕೋಪ ನಿರ್ವಹಣಾ ಇಲಾಖೆಯು ಹೊರಡಿಸಿದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಮೃತದೇಹದ ಫೋಟೊ, ವಿಡಿಯೊ ಮತ್ತು ಸಂಗ್ರಹಿಸುವ ಎಲ್ಲ ಮಾದರಿಗಳಲ್ಲಿ (ಹಲ್ಲು, ಡಿಎನ್ಎ) ಅದೇ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
ಮೃತದೇಹದ ಗುರುತು ಪತ್ತೆ ಹಚ್ಚಿ ಸಂಬಂಧಿಕರಿಗೆ ಹಸ್ತಾಂತರಿಸಲು ಪೊಲೀಸರು ಎಲ್ಲ ಪ್ರಯತ್ನ ಮಾಡಬೇಕು. ಆದರೂ ವಾರಸುದಾರರು ಬಗ್ಗೆ ಮಾಹಿತಿ ಲಭ್ಯವಾಗದಿದ್ದರೆ, ಶವವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಬೇಕು ಎಂದು ಹೇಳಿದೆ.
'ಮೃತದೇಹಗಳನ್ನು ಹೂಳುವ ಮೂಲಕ ಅಂತ್ಯಸಂಸ್ಕಾರ ಮಾಡಬೇಕು. ಬೇರೆ ವಿಧಾನದಲ್ಲಿ ಮಾಡುವಂತಿಲ್ಲ. ಹೂಳುವ ಜಾಗದಲ್ಲೂ ಗುರುತಿನ ಸಂಖ್ಯೆ ನಮೂದಿಸಬೇಕು. ಅಂತ್ಯ ಸಂಸ್ಕಾರದ ವೇಳೆ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಹಾಜರಿರಬೇಕು' ಎಂದು ಸ್ಪಷ್ಟಪಡಿಸಿದೆ.