ತ್ರಿಶ್ಶೂರ್ : ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮೋಹನನ್ ಕುನ್ನುಮ್ಮಲ್ ಅವರನ್ನು ಕುಲಪತಿಯನ್ನಾಗಿ ಮರುನೇಮಕ ಮಾಡಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಕಾನೂನು ಹೋರಾಟ ಪ್ರಾರಂಭಿಸಲಾಗುವುದು ಎಂದು ಕೇರಳದ ಆಡಳಿತಾರೂಢ ಪಕ್ಷ ಸಿಪಿಐ(ಎಂ) ತಿಳಿಸಿದೆ.
0
samarasasudhi
ಅಕ್ಟೋಬರ್ 26, 2024
ತ್ರಿಶ್ಶೂರ್ : ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮೋಹನನ್ ಕುನ್ನುಮ್ಮಲ್ ಅವರನ್ನು ಕುಲಪತಿಯನ್ನಾಗಿ ಮರುನೇಮಕ ಮಾಡಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಕಾನೂನು ಹೋರಾಟ ಪ್ರಾರಂಭಿಸಲಾಗುವುದು ಎಂದು ಕೇರಳದ ಆಡಳಿತಾರೂಢ ಪಕ್ಷ ಸಿಪಿಐ(ಎಂ) ತಿಳಿಸಿದೆ.
ಯಾವುದೇ ಚರ್ಚೆ ಇಲ್ಲದೇ ಆರಿಫ್ ಅವರು ಕೈಗೊಂಡ ಈ 'ಪ್ರಜಾಪ್ರಭುತ್ವ ವಿರೋಧಿ ನಿರ್ಧಾರ'ಕ್ಕೆ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ತಿಳಿಸಿದ್ದಾರೆ.
ಸರ್ಕಾರದ ಅನುದಾನ ಪಡೆಯುವ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಮಾಡುವಾಗ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಬೇಕು. ಆದರೆ, ತಮ್ಮ ಕ್ರಮದಿಂದ ರಾಜ್ಯಪಾಲರು ಈ ಕಾನೂನು ಅಥವಾ ಪ್ರಜಾಸತ್ತಾತ್ಮಕ ನೀತಿಯನ್ನು ಪಾಲಿಸಿಲ್ಲ ಎಂದು ಹೇಳಿದರು.
ರಾಜ್ಯಪಾಲರು ಶೈಕ್ಷಣಿಕ ವಲಯವನ್ನು ಕೇಸರೀಕರಣಗೊಳಿಸುವ ಯತ್ನ ಮಾಡುತ್ತಿದ್ದಾರೆ. ಆರ್ಎಸ್ಎಸ್ ಮತ್ತು ಬಿಜೆಪಿಯೊಂದಿಗೆ ಸಖ್ಯ ಹೊಂದಿರುವವರನ್ನು ವಿಶ್ವವಿದ್ಯಾಲಯದ ಸೆನೇಟ್ಗೆ ರಾಜ್ಯಪಾಲರು ನೇಮಕ ಮಾಡುತ್ತಿದ್ದಾರೆ ಎಂದು ಗೋವಿಂದನ್ ತಿಳಿಸಿದ್ದಾರೆ.
ಕುನ್ನುಮ್ಮಲ್ ಅವರ ವಿಸಿ ಅಧಿಕಾರದ ಅವಧಿಯು ಅ.25 ಕೊನೆಯಾಗಿತ್ತು. ಆದರೆ, ಅವರನ್ನು ಗುರುವಾರ ಮತ್ತೆ ಐದು ವರ್ಷಗಳ ಅವಧಿ ಅಥವಾ ಅವರು 70 ವರ್ಷ ತಲುಪುವ ಅವಧಿವರೆಗೆ (ಯಾವುದು ಮುಂಚೂಣಿಯಲ್ಲಿರುತ್ತದೋ ಅದು) ಮರು ನೇಮಕ ಮಾಡಲಾಗಿದೆ.
ಕೇರಳ ವಿಶ್ವವಿದ್ಯಾಲಯಕ್ಕೆ ನಿಯಮಿತ ಆಧಾರದ ಮೇಲೆ ವಿಸಿ ನೇಮಕವಾಗುವವರೆಗೆ ಕುನ್ನುಮ್ಮಲ್ ಅವರನ್ನು ಹೆಚ್ಚುವರಿಯಾಗಿ ಮಧ್ಯಂತರ ವಿಸಿಯಾಗಿ ನೇಮಕ ಮಾಡಲಾಗಿದೆ. ಎರಡೂ ನೇಮಕಾತಿಗಳು ಅ.26ರಿಂದ ಜಾರಿಗೆ ಬರಲಿವೆ.