'ಎಂ. ಟಿ ವಾಸುದೇವನ್ ನಾಯರ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಮಲಯಾಳಂ ಸಾಹಿತ್ಯ ಮತ್ತು ಚಿತ್ರರಂಗದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಅವರು ತಮ್ಮ ಕೃತಿಗಳಲ್ಲಿ ಮಾನವ ಭಾವನೆಗಳ ಆಳವಾದ ಅನ್ವೇಷಣೆ ಮೂಲಕ ಹಿಂದಿನ ಪೀಳಿಗೆಯನ್ನು ರೂಪಿಸಿದ್ದು ಮಾತ್ರವಲ್ಲದೆ, ಅನೇಕರಿಗೆ ಸ್ಫೂರ್ತಿ ನೀಡುತ್ತವೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ' ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಎಂ.ಟಿ' ಎಂದೇ ಪ್ರಸಿದ್ಧರಾಗಿದ್ದ ವಾಸುದೇವನ್ ಅವರು ಒಟ್ಟು 9 ಕಾದಂಬರಿ, 19 ಸಣ್ಣ ಕತೆಗಳ ಸಂಕಲನಗಳನ್ನು ರಚಿಸಿದ್ದರು. 6 ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಅವರು, 54 ಚಿತ್ರಗಳಿಗೆ ಚಿತ್ರಕತೆ ಬರೆದಿದ್ದರು. 7 ದಶಕಗಳ ಸಾಹಿತ್ಯಿಕ ಪಯಣದಲ್ಲಿ ಅವರು, ಪ್ರಬಂಧಗಳ ಹಲವು ಸಂಕಲನಗಳನ್ನು ಹಾಗೂ ಸ್ಮರಣ ಸಂಚಿಕೆಗಳನ್ನು ರಚಿಸಿದ್ದರು.
ಅವರ 'ನಾಲುಕೆಟ್ಟು' (ಪೂರ್ವಿಕರ ಮನೆ) ಕಾದಂಬರಿಯನ್ನು ಮಲಯಾಳ ಸಾಹಿತ್ಯದ ಮೇರು ಕೃತಿ ಎಂದೇ ಪರಿಗಣಿಸಲಾಗುತ್ತದೆ. 'ಅರಸುವೀಟ್ಟು', 'ಮಂಜು' ಹಾಗೂ 'ಕಾಲಮ್'ನಂತಹ ಹಲವು ಮಹಾನ್ ಕೃತಿಗಳನ್ನು ರಚಿಸಿದ್ದರು.
ಸಾಹಿತ್ಯ ಸೇವೆ ಪರಿಗಣಿಸಿ 1995ರಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಯಲಾರ್ ಪ್ರಶಸ್ತ್ರಿ, ವಲ್ಲತ್ತೋಳ್ ಪ್ರಶಸ್ತಿ, ಎಳುತ್ತಚ್ಚನ್ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪ್ರಶಸ್ತಿ, ಒ.ಎನ್.ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದರು.




