ನವದೆಹಲಿ: ಸಂಸತ್ ಭವನದ ಪ್ರವೇಶ ದ್ವಾರದ ಬಳಿ ಎನ್ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಸಂಸದರ ನಡುವೆ ನಡೆದ ಗಲಾಟೆ ಸಂಬಂಧ ದೂರು ನೀಡಲು ಎನ್ಡಿಎ ಬಣದ ಮೂವರು ಸಂಸದರು ಪೊಲೀಸ್ ಠಾಣೆಗೆ ತೆರೆಳಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸಂಸತ್ ಭವನದ ಮಕರ ದ್ವಾರದ ಬಳಿ BJP ಸಂಸದರಿಂದ ನನ್ನ ಮೇಲೆ ಹಲ್ಲೆ: ಖರ್ಗೆ
ಬಿಜೆಪಿ ಸಂಸದರಾದ ಅನುರಾಗ್ ಠಾಕೂರ್, ಬಾನ್ಸುರಿ ಸ್ವರಾಜ್ ಹಾಗೂ ಟಿಡಿಪಿಯ ಓರ್ವ ಸಂಸದ ಪಾರ್ಲಿಮೆಂಟ್ ಸ್ಟೀಟ್ ಪೊಲೀಸ್ ಠಾಣೆಗೆ ತೆರಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ ಇಂಡಿಯಾ ಬಣದ ಶಾಸಕರು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಆಡಳಿತರೂಢ ಎನ್ಡಿಎ ಸಂಸದರೂ ಪ್ರತಿಭಟನೆ ನಡೆಸಿದ್ದಾರೆ. ಉಭಯ ಬಣಗಳ ಸಂಸದರು ಮುಖಾಮುಖಿಯಾಗಿದ್ದಾರೆ.
ಈ ವೇಳೆ ನಡೆದ ತಳ್ಳಾಟ ನೂಕಾಟದಲ್ಲಿ ಬಿಜೆಪಿಯ ಹಿರಿಯ ಸಂಸದ ಪ್ರತಾಪ್ ಚಂದ್ರ ಸಾರಂಗಿಯವರ ತಲೆಗೆ ಗಾಯ ಉಂಟಾಗಿದೆ. ರಾಹುಲ್ ಗಾಂಧಿ ತಳ್ಳಿದ ಸಂಸದರೊಬ್ಬರು ನನ್ನ ಮೇಲೆ ಬಿದ್ದಿದ್ದಾರೆ ಎಂದು ಸಾರಂಗಿ ಆರೋಪಿಸಿದ್ದಾರೆ.
ಗದ್ದಲದಲ್ಲಿ ಬಿಜೆಪಿ ಸಂಸದ ಮುಕೇಶ್ ರಜಪುತ್ ಕೂಡ ಗಾಯಗೊಂಡಿದ್ದಾರೆ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘಾವಾಲ್ ತಿಳಿಸಿದ್ದಾರೆ.
ಗಾಯಗೊಂಡಿರುವ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.




