ನವದೆಹಲಿ: ವಂದೆ ಭಾರತ್ ರೈಲಿನಲ್ಲಿ ಪ್ರಯಾಣಿಸುವವರು ಟಿಕೆಟ್ ಕಾಯ್ದಿರಿಸುವಾಗ ಆಹಾರ ಬೇಕೆಂದು ಮೊದಲೇ ಆಯ್ಕೆ ಮಾಡಿರದಿದ್ದರೂ ಪ್ರಯಾಣದ ವೇಳೆ ರೈಲಿನಲ್ಲಿ ಆಹಾರ ಖರೀದಿಸಲು ಅವಕಾಶವಿದೆ ಎಂದು ರೈಲ್ವೆ ಮಂಡಳಿ ಶುಕ್ರವಾರ ಹೇಳಿದೆ.
ಐಆರ್ಸಿಟಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿರುವ ಆದೇಶದಲ್ಲಿ ರೈಲ್ವೆ ಮಂಡಳಿಯು ಈ ವಿಷಯವನ್ನು ತಿಳಿಸಿದೆ.
ವಂದೆ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಎಲ್ಲರೂ ಪ್ರಯಾಣದ ವೇಳೆ ಬೇಯಿಸಿದ ಆಹಾರ (ಮೀಲ್ಸ್) ಖರೀದಿಸಲು ಅವಕಾಶವಿದೆ. ಜತೆಗೆ, ಸಿದ್ಧ (ರೆಡಿ ಟು ಈಟ್) ಆಹಾರವನ್ನೂ ಖರೀದಿಸಬಹುದಾಗಿದೆ. ಪೂರ್ವ ಪಾವತಿಯ ಆಹಾರವನ್ನು ಪ್ರಯಾಣಿಕರಿಗೆ ನಿಗದಿತ ಸಮಯದೊಳಗೆ ವಿತರಿಸಬೇಕು. ಪ್ರಯಾಣಿಕರಿಗೆ ಕಿರಿಕಿರಿಯಾಗಬಾರದು ಎಂಬ ಕಾರಣಕ್ಕೆ ರಾತ್ರಿ 9 ಗಂಟೆಯ ನಂತರ ಆಹಾರ ಪೂರೈಕೆ, ಮಾರಾಟ ಮಾಡಲು ವೆಂಡರ್ಗಳಿಗೆ ಅವಕಾಶವಿರುವುದಿಲ್ಲ ಎಂದೂ ಹೇಳಿದೆ.
ಟಿಕೆಟ್ ಕಾಯ್ದಿರಿಸುವಾಗ ಆಹಾರ ಆಯ್ಕೆ ಮಾಡಿರದವರಿಗೆ, ಹಣ ಪಾವತಿಸುತ್ತೇವೆಂದರೂ ಐಆರ್ಸಿಟಿಸಿ ಸಿಬ್ಬಂದಿ ಪ್ರಯಾಣದ ವೇಳೆ ಆಹಾರ ನೀಡಲು ನಿರಾಕರಿಸುತ್ತಿದ್ದಾರೆಂದು ಅನೇಕ ಪ್ರಯಾಣಿಕರು ಹಲವು ಬಾರಿ ದೂರು ನೀಡಿದ್ದರು.



