ನವದೆಹಲಿ: ಭವಿಷ್ಯದಲ್ಲಿ ಚುನಾವಣಾ ಫಲಿತಾಂಶಗಳಿಗೆ ಪಕ್ಷದ ಉನ್ನತ ನಾಯಕರನ್ನು ಹೊಣೆಗಾರರನ್ನಾಗಿಸಲಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಬಂದ ಟೀಕೆಗಳ ಹಿನ್ನೆಲೆಯಲ್ಲಿ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ಹೊಸ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷವನ್ನು ಮೂಲದಿಂದ ಕಟ್ಟಲು ಮತ್ತು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಕೆಲಸ ಮಾಡುವಂತೆ ಪಕ್ಷದ ನಾಯಕರಿಗೆ ಒತ್ತಾಯಿಸಿದರು. ಸೈದ್ಧಾಂತಿಕವಾಗಿ ಪಕ್ಷಕ್ಕೆ ಬದ್ಧವಾಗಿರುವಂತಹವರನ್ನು ಉತ್ತೇಜಿಸಿ ಎಂದರು.
ಪಕ್ಷದ ಸಂಘಟನೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಇನ್ನಷ್ಟು ಬದಲಾವಣೆಗಳನ್ನು ತರಲಾಗುವುದು ಎಂದು ಹೇಳಿದರು.
'ಚುನಾವಣಾ ಫಲಿತಾಂಶಗಳ ಜವಾಬ್ದಾರಿಯ ಕುರಿತಾದ ಪ್ರಮುಖ ವಿಷಯದ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ. ರಾಜ್ಯಗಳಲ್ಲಿನ ಸಂಘಟನೆಗೆ ಪುನಶ್ಚೇತನ ನೀಡಲು ಮುಂದಿನ ಎಲ್ಲ ಚುನಾವಣಾ ಫಲಿತಾಂಶಗಳಿಗೆ ನಿಮ್ಮೆಲ್ಲರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು' ಎಂದು ಪದಾಧಿಕಾರಿಗಳಿಗೆ ಹೇಳಿದರು.
ಪಕ್ಷವು ಸಂಘಟನೆಯಲ್ಲಿ ಇತ್ತೀಚೆಗೆ ಮಾಡಿದ ಕೆಲ ಬದಲಾವಣೆಗಳಲ್ಲಿ ಹೊಸ ಪದಾಧಿಕಾರಿಗಳನ್ನು ಕರೆತಂದಿದೆ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಲ್ಲ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ರಾಜ್ಯಗಳ ಉಸ್ತುವಾರಿಗಳು ಇದ್ದರು.
ಬೂತ್ನಿಂದ ಕೇಂದ್ರ ಕಚೇರಿವರೆಗೆ ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಕಷ್ಟಕಾಲದಲ್ಲಿ ಪಕ್ಷದ ಬೆನ್ನಿಗೆ ಬಂಡೆಯಂತೆ ನಿಲ್ಲುವ ಸೈದ್ಧಾಂತಿಕ ಬದ್ಧತೆ ಇರುವವರನ್ನು ಕರೆತರಬೇಕು ಎಂದು ಖರ್ಗೆ ಹೇಳಿದರು.
'ಕೆಲವೊಮ್ಮೆ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸುವಾಗ, ತರಾತುರಿಯಲ್ಲಿ ಕೆಲವರನ್ನು ಕರೆತಂದಾಗ ಕಷ್ಟದ ಸಮಯದಲ್ಲಿ ಅವರು ಓಡಿಹೋಗುತ್ತಾರೆ. ಅಂತಹವರಿಂದ ನಾವು ದೂರವಿರಬೇಕು,' ಎಂದು ಪಕ್ಷದ ಮುಖಂಡರಿಗೆ ತಿಳಿಹೇಳಿದರು.

