ಕಾಸರಗೋಡು: ಜಿಲ್ಲೆಯ ಅರವತ್ನಲ್ಲಿ ಹೊಸದಾಗಿ ನಿರ್ಮಿಸಲಾದ ನಾಟ್ಯರತ್ನಂ ಕಣ್ಣನ್ ಪಾಟಾಳಿ ಕಥಕ್ಕಳಿ ಟ್ರಸ್ಟ್ನ ಸ್ಮಾರಕ ಮಂಟಪದ ಉದ್ಘಾಟನೆ, ಆಂಫಿಥಿಯೇಟರ್ನ ಲೋಕಾರ್ಪಣೆ ಮತ್ತು ವಾರ್ಷಿಕ ದಿನಾಚರಣೆ ಏಪ್ರಿಲ್ 19 ಮತ್ತು 20 ರಂದು ನಡೆಯಲಿದೆ. ಈ ಸಂದರ್ಭ ಆರು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಡಾ. ಎ.ಎಂ. ಶ್ರೀಧರನ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ. ಭೂತಾರಾಧನೆ ಕಲೆ-ಕಲಾವಿದ-ಬದುಕು ಮತ್ತು ಜೀವನೋಪಾಯ, ಬದುಕಿನ ಸಮಸ್ಯೆಗಳು-ಸಾಂಸ್ಕøತಿಕ ಸವಾಲುಗಳು ಮೊದಲಾದ ಆರು ಗೋಷ್ಠಿಗಳು ನಡೆಯಲಿದೆ.
ಮೇ 19ರಂದು ನಡೆಯಲಿರುವ ಸಮ್ಮೇಳನವನ್ನು ಶಾಸಕ ಸಿ.ಎಚ್ ಕುಞಂಬು ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ ಡಾ. ಎ.ಎಂ. ಶ್ರೀಧರನ್ ಅಧ್ಯಕ್ಷತೆ ವಹಿಸುವರು. ಡಾ. ವೈ.ವಿ. ಕಣ್ಣನ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಜೆ ಸಾಂಸ್ಕøತಿಕ ಸಮ್ಮೇಳನದಲ್ಲಿ ಪದ್ಮಶ್ರೀ ಮಟ್ಟನ್ನೂರ್ ಶಂಕರನ್ಕುಟ್ಟಿ ಮಾರಾರ್ ಅವರು ಸ್ಮಾರಕ ಮಂದಿರವನ್ನು ಉದ್ಘಾಟಿಸಿ, ಭಾವ ಭಾರತಿ ಪ್ರಶಸ್ತಿ ಪ್ರದಾನ ನಡೆಸುವರು. ಶಾಸಕರಾದ ಇ. ಚಂದ್ರಶೇಖರನ್, ಎನ್.ಎ.ನೆಲ್ಲಿಕುನ್ನು, ಕಾಸರಗೋಡು ಜಿಪಂ ಅದ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹೊಸದಾಗಿ ನಿರ್ಮಿಸಲಾದ ಆಂಫಿಥಿಯೇಟರನ್ನು ನಜೀರ್ ವೆಲಿಯಿಲ್ ಲೋಕಾರ್ಪಣೆಗೈಯುವರು. ಈ ಸಂದರ್ಭ ಟ್ರಸ್ಟ್ ಅಧೀನದಲ್ಲಿ ಕಥಕ್ಕಳಿ ತರಬೇತಿ ಪೂರ್ತಿಗೊಳಿಸಿದ ವಿದ್ಯಾರ್ಥಿಗಳ ಪ್ರಥಮ ಪ್ರದರ್ಶನ ನಡೆಯಲಿದೆ.
ಏಪ್ರಿಲ್ 20 ರ ಭಾನುವಾರ ನಡೆಯಲಿರುವ ಸಮಾರೋಪ ಸಮಾರಂಭದ ಉದ್ಘಾಟನೆ ಮತ್ತು ಟ್ರಸ್ಟ್ನಿಂದ ವಾರ್ಷಿಕವಾಗಿ ನೀಡಲಾಗುವ ನಾಟ್ಯಾಚಾರ್ಯ ಮತ್ತು ಪ್ರತಿಭಾ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಬಂದರು ಮತ್ತು ವಸ್ತು ಸಂಗ್ರಹಾಲಯ ಖಾತೆ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ನೆರವೇರಿಸುವರು. ಟ್ರಸ್ಟ್ ಅಧ್ಯಕ್ಷ ಡಾ. ಎ.ಎಂ ಶ್ರೀಧರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾರ್ಯಕ್ರಮದ ಅಂಗವಾಗಿ ಕೊಟ್ಟಕ್ಕಲ್ ಸಿ.ಎಂ ಉಣ್ಣಿಕೃಷ್ಣನ್ ಮತ್ತು ತಂಡದವರಿಂದ 'ಸೀತಾ ಸ್ವಯಂವರಂ -ಕಿರಾತಂ' ಕಥಕ್ಕಳಿ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿ.ವಿ. ಭಾಸ್ಕರನ್, ಮಧು ಮುದಿಯಕ್ಕಾಲ್, ಡಾ.ಪಿ.ಕೆ. ಜಯರಾಜನ್ ಉಪಸ್ಥಿತರಿದ್ದರು.





