ಮುಳ್ಳೇರಿಯ: ನೆಕ್ರಾಜೆ ಸಂತಾನ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಧನ್ವಂತರಿ ಪುತ್ರ ಕಾಮೇಷ್ಠಿ ಯಾಗ ಸಂಪನ್ನಗೊಂಡಿತು. ಸಮಾರಂಭವನ್ನು ಡಾ. ವೇಣುಗೋಪಾಲ ಕಳೆಯತ್ತೋಡಿ ಅವರು ದೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿದರು. ವಿವಿಧ ಸಂಘಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ವೈದಿಕ ವಿದ್ವಾಂಸ ಕಶೆಕೋಡಿ ಶ್ರೀ ಸೂರ್ಯನಾರಾಯಣ ಭಟ್ ಕಲ್ಲಡ್ಕ ನೇತೃತ್ವದಲ್ಲಿ ಗಣಪತಿ ಹೋಮ,ಯಾಗ ಸಂಕಲ್ಪ ಧನ್ವಂತರಿ ನಾಮಜಪ ಯಜ್ಞ, ಧನ್ವಂತರೀಯಾಗ, ಪುತ್ರ ಕಾಮೆಷ್ಠಿ ಯಾಗ ನೆರವೇರಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ, ಆಧ್ಯಾತ್ಮಿಕ ಶಕ್ತಿ ಆರಾಧನೆ, ಜಪ ತಪ ಯಾಗದಿಂದ ಸಂತತಿ, ಈ ಎಲ್ಲ ವಿಚಾರಗಳನ್ನು ವೈಜ್ಞಾನಿಕವಾಗಿ ತುಲನೆ ಮಾಡಬಾರದು, ಏಕಾಗ್ರತೆಯೊಂದಿಗೆ ಭಗವಂತನ ಸೇವೆಯಲ್ಲಿ ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಂಡಾಗ ಪರಿಪೂರ್ಣವಾದ ಅನುಗ್ರಹ ಹಾಗೂ ಸತ್ ಫಲವನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.
ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಎನ್.ಆರ್ ದಾಮೋದರ ಶರ್ಮ ಬಾರ್ಕೂರು ಅವರು ಧಾರ್ಮಿಕ ಉಪನ್ಯಾಸ ನೀಡಿ, ಶ್ರೀರಾಮ ಇನ್ನು ಹುಟ್ಟಿ ಬರಲಾಗದಿದ್ದರೂ, ಶ್ರೀರಾಮನ ಗುಣಗಳಿರುವ ಮಕ್ಕಳು ಹುಟ್ಟಿ ಬರಬಹುದು. ಅಂತಹ ಸತ್ಪುರುಷರನ್ನು ಪಡೆಯುವುದು ನಮ್ಮ ಉದ್ದೇಶವಾಗಲಿ, ಇದರಿಂದ ನಮ್ಮ ಧರ್ಮ ಮತ್ತು ದೇಶ ಬೆಳಗುವಂತಾಗಲಿ ಎಂದು ತಿಳಿಸಿದರು.
ಯಾಗ ಸಮಿತಿ ಅಧ್ಯಕ್ಷ ರಘುನಾಥ್ ಪೈ ಕುಂಬಳೆ ಉಪಸ್ಥಿತರಿದ್ದರು. ಸಭೆಯಲ್ಲಿ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.
ಈ ಸಂದರ್ಬ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರನ್ನು ಗಂಗಾಧರ ರೈ ಮಾಸ್ಟರ್ ಮವ್ವಾರು ಗೌರವಿಸಿದರು. ಮಂಜುನಾಥ ಮಾನ್ಯ ಸ್ವಾಗತಿಸಿದರು. ಲೋಕೇಶ್ ಎಂ.ಬಿ ಆಚಾರ್ ಕಂಬಾರು ಕಾರ್ಯಕ್ರಮ ನಿರೂಪಿಸಿದರು. ಗಣೇಶ ವತ್ಸ ವಂದಿಸಿದರು.





