HEALTH TIPS

ಸೇನಾ ಸಂಘರ್ಷ ಶಮನ | ದ್ಚಿಪಕ್ಷೀಯ ನಿರ್ಧಾರ: ಸಂಸದೀಯ ಸಮಿತಿಗೆ ಮಿಸ್ರಿ ಮಾಹಿತಿ

ನವದೆಹಲಿ: 'ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವು ಯಾವಾಗಲೂ ಸಾಂಪ್ರದಾಯಿಕ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದೆ ಹಾಗೂ ಪಾಕಿಸ್ತಾನದಿಂದ ಅಣ್ವಸ್ತ್ರ ಕುರಿತು ಯಾವುದೇ ಸಂಕೇತ ಬಂದಿಲ್ಲ' ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸೋಮವಾರ ಸಂಸದೀಯ ಸಮಿತಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.

ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಂಸದ ಶಶಿ ತರೂರ್‌ ಅಧ್ಯಕ್ಷತೆಯಲ್ಲಿ ನಡೆದ ಸಂಸತ್ತಿನ ಸ್ಥಾಯಿ ಸಮಿತಿ ಸಭೆಗೆ ಅವರು ವಿವರಣೆ ನೀಡಿದರು.

ಉಭಯ ದೇಶಗಳ ನಡುವಿನ ಸೇನಾ ಸಂಘರ್ಷವನ್ನು ನಿಲ್ಲಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನಿರ್ವಹಿಸಿದ ಪಾತ್ರದ ಕುರಿತ ಕೆಲ ಸಂಸದರು ಕೇಳಿದ ಪ್ರಶ್ನೆಗೆ, 'ಎರಡೂ ದೇಶಗಳ ಸೇನಾ ಸಂಘರ್ಷವನ್ನು ನಿಲ್ಲಿಸುವ ನಿರ್ಧಾರವನ್ನು ದ್ಪಿಪಕ್ಷೀಯ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ' ಎಂದು ಉತ್ತರಿಸಿದರು. ಈ ಮೂಲಕ ಅವರು ಸರ್ಕಾರದ ನಿಲುವನ್ನು ಪುನರುಚ್ಚರಿಸಿದರು.

ಸೇನಾ ಸಂಘರ್ಷ ಶಮನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಪ್‌ ಮಾಡಿದ ಪ್ರತಿಪಾದನೆಗಳ ಕುರಿತು ವಿರೋಧ ಪಕ್ಷಗಳ ಸದಸ್ಯರು ಕೇಳಿದಾಗ, 'ಅಮೆರಿಕದ ಅಧ್ಯಕ್ಷರು ಹಾಗೆ ಮಾಡಲು ನನ್ನ ಅನುಮತಿ ಪಡೆಯಲಿಲ್ಲ' ಎಂದು ವ್ಯಂಗ್ಯವಾಗಿ ಹೇಳಿದರು.

ಸಂಘರ್ಷದ ವೇಳೆ ಪಾಕಿಸ್ತಾನವು ಚೀನಾ ವೇದಿಕೆಗಳನ್ನು ಬಳಸಿಕೊಂಡಿದೆಯೇ ಎಂದು ಕೆಲ ಸಂಸದರು ಪ್ರಶ್ನಿಸಿದರು. ಭಾರತವು ಪಾಕ್‌ನ ವಾಯುನೆಲೆಗಳ ಮೇಲೆ ದಾಳಿ ಮಾಡಿದ್ದರಿಂದ ಅದು ಅಪ್ರಸ್ತುತ ಎಂದು ಮಿಸ್ರಿ ಪ್ರತಿಕ್ರಿಯಿಸಿದರು ಎಂದು ಮೂಲಗಳು ಹೇಳಿವೆ.

ಟರ್ಕಿಯೇ ದೇಶವು ಭಾರತ ವಿರೋಧಿ ನಿಲುವು ವ್ಯಕ್ತಪಡಿಸಿದ್ದ ಕುರಿತ ಪ್ರಶ್ನೆಗೆ, 'ಆ ದೇಶವು ಸಾಂಪ್ರದಾಯಿಕವಾಗಿ ಭಾರತವನ್ನು ಬೆಂಬಲಿಸುತ್ತಿರಲಿಲ್ಲ' ಎಂದರು.

ಸಮಿತಿ ಖಂಡನೆ:

ಸೇನಾ ಕಾರ್ಯಾಚರಣೆ ನಿಲ್ಲಿಸಿದ ಕುರಿತ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಮಿಸ್ರಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡಿದ್ದನ್ನು ಸಮಿತಿಯ ಸದಸ್ಯರು ಸರ್ವಾನುಮತದಿಂದ ಖಂಡಿಸಿದರು. ಮಿಸ್ರಿ ಅವರ ವೃತ್ತಿಪರ ನಡವಳಿಕೆಯನ್ನು ಸದಸ್ಯರು ಶ್ಲಾಘಿಸಿದರು ಎಂದು ಮೂಲಗಳು ಹೇಳಿವೆ.

ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸಮಿತಿ ಸದಸ್ಯರಾದ ಟಿಎಂಸಿಯ ಅಭಿಷೇಕ್‌ ಬ್ಯಾನರ್ಜಿ, ಕಾಂಗ್ರೆಸ್‌ನ ರಾಜೀವ್‌ ಶುಕ್ಲಾ, ದೀಪೇಂದರ್‌ ಹೂಡಾ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಮತ್ತು ಬಿಜೆಪಿಯ ಅಪರಾಜಿತ ಸಾರಂಗಿ, ಅರುಣ್‌ ಗೋವಿಲ್‌ ಸೇರಿದಂತೆ 24 ಸದಸ್ಯರು ಭಾಗವಹಿಸಿದ್ದರು.

ಪಹಲ್ಗಾಮ್‌ ದಾಳಿ ಬಳಿಕ ಪ್ರತೀಕಾರ ತೆಗೆದುಕೊಳ್ಳಲು ಭಾರತ ನಡೆಸಿದ 'ಆಪರೇಷನ್‌ ಸಿಂಧೂರ್‌' ಮತ್ತು ಆ ನಂತರ ಎರಡೂ ದೇಶಗಳ ನಡುವಿನ ಸೇನಾ ಸಂಘರ್ಷ ನಡೆದ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು. ಉಭಯ ದೇಶಗಳು ಮೇ 10ರಂದು ಸೇನಾ ಕಾರ್ಯಾಚರಣೆ ನಿಲ್ಲಿಸುವ ಒಪ್ಪಂದ ಮಾಡಿಕೊಂಡವು.

ಶಶಿ ತರೂರ್‌ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷಮಿಸ್ರಿ ವಿರುದ್ಧದ ಟ್ರೋಲ್‌ ಅನ್ನು ಸರ್ವಾನುಮತದಿಂದ ಖಂಡಿಸಲಾಯಿತು. ಈ ಸಂಬಂಧ ನಿರ್ಣಯ ಅಂಗೀಕರಿಸಲು ಸಭೆ ಬಯಸಿತ್ತು. ಆದರೆ ಹಾಗೆ ಮಾಡದಂತೆ ಮಿಸ್ರಿ ಕೋರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries