ದಾಹೋದ್: 'ಭಾರತವನ್ನು ದ್ವೇಷಿಸುವುದೇ ಪಾಕಿಸ್ತಾನದ ಉದ್ದೇಶವಾಗಿದ್ದು, ಹಾನಿ ಮಾಡುವ ಮಾರ್ಗಗಳ ಕುರಿತೇ ಯೋಚಿಸುತ್ತದೆ. ಆದರೆ, ನಾವು ದೇಶದ ಬಡತನವನ್ನು ಹೋಗಲಾಡಿಸಿ, ಆರ್ಥಿಕ ಅಭಿವೃದ್ಧಿ ತರುವ ಗುರಿ ಹೊಂದಿದ್ದೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದರು.
ದಾಹೋದ್ನಲ್ಲಿ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ಪ್ರಶಂಸಿಸಿದರು.
'ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿಹಾಕುವ ದುಸ್ಸಾಹಸ ಮಾಡಿದವರಿಗೆ ಅಂತ್ಯವು ಸನ್ನಿಹಿತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು' ಎಂದರು.
'ಇಬ್ಭಾಗಗೊಂಡ ಬಳಿಕ ಹುಟ್ಟಿಕೊಂಡ ದೇಶವೊಂದು ಭಾರತವನ್ನು ದ್ವೇಷಿಸುವುದನ್ನೇ ವೃತ್ತಿಯಾಗಿಸಿಕೊಂಡಿದೆ. ಭಾರತಕ್ಕೆ ಹಾನಿ ಮಾಡುವುದನ್ನೇ ಬಯಸುತ್ತದೆ. ಆದರೆ, ಭಾರತವು ಆರ್ಥಿಕ ಅಭಿವೃದ್ಧಿ ಮೂಲಕ ಬಡತನವನ್ನು ಹೋಗಲಾಡಿಸುವ ಗುರಿ ಹೊಂದಿದೆ. ಆ ಮೂಲಕ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಬದಲಾಯಿಸುತ್ತಿದೆ. ಹಿಂದುಳಿದ ಪ್ರದೇಶಗಳಿಗೆ ಅಭಿವೃದ್ಧಿ ಕೊಂಡೊಯ್ಯುವುದೇ ಸರ್ಕಾರದ ನೀತಿಯಾಗಿದೆ' ಎಂದು ಮೋದಿ ತಿಳಿಸಿದರು.
ದೇಶಿ ವಸ್ತುಗಳನ್ನು ಬಳಸಿ: ಹೋಳಿ, ದೀಪಾವಳಿ, ಗಣೇಶ ಪೂಜೆ ವೇಳೆ ಭಾರತದಲ್ಲೇ ಉತ್ಪಾದಿಸಿದ ವಸ್ತುಗಳನ್ನು ಖರೀದಿಸಿ, ಬಳಸುವಂತೆ ಕರೆ ನೀಡಿದ ಅವರು, ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಲೋಕೋ ಉತ್ಪಾದನಾ ಕಾರ್ಖಾನೆ ಸೇರಿದಂತೆ ₹24 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಅಹಮದಾಬಾದ್-ವೆರಾವಲ್ ನಡುವೆ ವಂದೇ ಭಾರತ್ ರೈಲು ಸೇವೆ, ವಲಸಾಡ್-ದಾಹೋದ್ ಎಕ್ಸ್ಪ್ರೆಸ್ ರೈಲು ಸೇವೆಗೂ ಚಾಲನೆ ನೀಡಿದರು.

ಗುಜರಾತ್ನ ವಡೋದರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರೋಡ್ಶೋ ನಡೆಸಿದರು

ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಕುಟುಂಬದ ಸದಸ್ಯರು ಪ್ರಧಾನಿ ಮೋದಿ ಅವರಿಗೆ ಪುಷ್ಪವೃಷ್ಟಿ ಮಾಡಿದರು-ಪಿಟಿಐ ಚಿತ್ರ




